ಚನ್ನರಾಯಪಟ್ಟಣ (ಹಾಸನ ಜಿಲ್ಲೆ): ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ಬೆಕ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೇಶವಮೂರ್ತಿ ಅವರನ್ನು ಸಿಐಡಿ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ಗಾಂಧಿ ವೃತ್ತದ ಬಳಿಯಿರುವ ಮನೆಯಿಂದ ಕೇಶವಮೂರ್ತಿ ಅವರನ್ನು ವಿಚಾರಣೆಗಾಗಿ ಅಧಿಕಾರಿಗಳು ಶನಿವಾರ ಬೆಂಗಳೂರಿಗೆ ಕರೆದೊಯ್ದಿದ್ದರು. ಇದೇ ಪ್ರಕರಣದಲ್ಲಿ ಚನ್ನರಾಯಪಟ್ಟಣದ ಪುರಸಭೆ ಸದಸ್ಯರೊಬ್ಬರು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗೆ ಮುಂದಾಗಿದ್ದಾರೆ.
ಬೆಕ್ಕ ಗ್ರಾಮದ ಚಂದ್ರಶೇಖರ್ ಅವರ ಪುತ್ರ ವೆಂಕಟೇಶ್ಪಿಎಸ್ಐ ಹುದ್ದೆಯ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ. ಇದಕ್ಕಾಗಿ ಚಂದ್ರಶೇಖರ್ ತನ್ನ ಸಂಬಂಧಿ ಕೇಶವಮೂರ್ತಿ ಮೂಲಕ ₹ 40 ಲಕ್ಷ ನೀಡಿದ್ದರು ಎನ್ನಲಾಗಿದೆ. ವೆಂಕಟೇಶ್ ಹಾಗೂ ಚಂದ್ರಶೇಖರ್ ಅವರನ್ನೂ ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು.
ವೆಂಕಟೇಶ್ ಅರಸೀಕೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದರಲ್ಲಿ ನರೇಗಾ ಯೋಜನೆಯಡಿ ಕಿರಿಯ ಎಂಜಿನಿಯರ್ ಆಗಿ ಹೊರಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿದ್ದರು.