ಬೆಂಗಳೂರು: ಎಲ್ಲಾ ಲೋಪಕ್ಕೂ ಕೋವಿಡ್ ಕಾರಣ ನೀಡಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ನಿರೀಕ್ಷಣಾ ಜಾಮೀನು ಆದೇಶದಲ್ಲಿದ್ದ ನಿರ್ಬಂಧ ಸಡಿಲಿಕೆ ಕೋರಿದ್ದ ಅರ್ಜಿಯೊಂದನ್ನು ವಜಾಗೊಳಿಸಿದೆ. 10 ದಿನಗಳಲ್ಲಿ ಪೊಲೀಸ್ ಮುಂದೆ ಹಾಜರಾಗುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.
ಮಂಡ್ಯ ನಿವಾಸಿ ದೇವರಾಜ್ ಎಂಬುವರ ವಿರುದ್ಧ ನಾಗಮಂಗಲ ಗ್ರಾಮಾಂತರ ಪೊಲೀಸರು ಸ್ಪೋಟಕ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣವನ್ನು 2019ರ ನವೆಂಬರ್ 4ರಂದು ದಾಖಲಿಸಿದ್ದರು. ಟೈಫಾಯಿಡ್ನಿಂದ ಬಳಲುತ್ತಿದ್ದ ಕಾರಣ ನೀಡಿದ್ದಕ್ಕಾಗಿ ನಿರೀಕ್ಷಣಾ ಜಾಮೀನನ್ನು ನ್ಯಾಯಾಲಯ ನೀಡಿತ್ತು. ಚೇತರಿಸಿಕೊಂಡ ಬಳಿಕ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಆದೇಶಿಸಿತ್ತು.
2021 ಏಪ್ರಿಲ್ 23ರಂದು ಹೈಕೋರ್ಟ್ ಮುಂದೆ ಹೊಸ ಅರ್ಜಿ ಸಲ್ಲಿಸಿರುವ ದೇವರಾಜ್, ಕೋವಿಡ್ ಸಾಂಕ್ರಮಿಕ ರೋಗ ಎಲ್ಲೆಡೆ ತೀವ್ರವಾಗಿ ಹರಡುತ್ತಿರುವ ಕಾರಣ ಪೊಲೀಸರ ಮುಂದೆ ಶರಣಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
10 ದಿನಗಳಲ್ಲಿ ಪೊಲೀಸರ ಮುಂದೆ ಶರಣಾಗುವಂತೆ ಆದೇಶಿಸಿದ್ದರೂ, 15 ತಿಂಗಳ ಬಳಿಕ ಹೊಸ ಅರ್ಜಿ ಹಿಡಿದು ಬಂದಿರುವ ಅರ್ಜಿದಾರರ ವಿರುದ್ಧ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಗರಂ ಆಯಿತು. ಎಲ್ಲಾ ಲೋಪಕ್ಕೂ ಸಾಂಕ್ರಾಮಿಕ ರೋಗದ ಕಾರಣ ನೀಡಿ ಕ್ಷಮಿಸಲು ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.
‘ಟೈಫಾಯಿಡ್ನಿಂದ ಚೇತರಿಸಿಕೊಂಡಿದ್ದರೂ ಪೊಲೀಸ್ ಠಾಣೆಗೆ ಶರಣಾಗಿಲ್ಲ. ಈ ತನಕ ನ್ಯಾಯಾಲಯವನ್ನು ಸಂಪರ್ಕಿಸುವ ಪ್ರಯತ್ನವನ್ನೂ ಮಾಡಿಲ್ಲ. ಈಗ ಕೋವಿಡ್ ತೀವ್ರಗೊಂಡಿರುವ ಸಂದರ್ಭದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಮಾನ್ಯ ಮಾಡಲು ಸಾಧ್ಯವಿಲ್ಲ’ ಎಂದು ತಿಳಿಸಿತು. ಅರ್ಜಿದಾರನಿಗೆ ₹2 ಸಾವಿರ ದಂಡ ವಿಧಿಸಿ ಅರ್ಜಿ ವಜಾಗೊಳಿಸಿತು.