ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಸಾವಿರಾರು ಹೆಕ್ಟೇರ್‌ ಬೆಳೆ ಹಾನಿ

Last Updated 18 ನವೆಂಬರ್ 2021, 21:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವಡೆ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗಳು ಹಾನಿಗೀಡಾಗಿವೆ. ನೂರಾರು ಮನೆಗಳು, ದೇವಸ್ಥಾನದ ಗೋಡೆ, ಶಾಲಾ ಕಟ್ಟಡ ಕುಸಿದಿವೆ.

ಕೋಲಾರ ಜಿಲ್ಲೆಯೊಂದರಲ್ಲಿಯೇ 36 ಸಾವಿರ ಹೆಕ್ಟೇರ್‌ ರಾಗಿ ಮತ್ತು ತೋಟಗಾರಿಕೆ ಬೆಳೆಗಳು ನಷ್ಟವಾಗಿವೆ. ₹5.78 ಕೋಟಿ ಮೌಲ್ಯದ 1,370 ಹೆಕ್ಟೇರ್‌ನಲ್ಲಿದ್ದ ಟೊಮೆಟೊ ಹಾಗೂ ತರಕಾರಿ, ಸೊಪ್ಪು ಜಮೀನಿನಲ್ಲೇ ಕೊಳೆ
ಯುತ್ತಿವೆ. ರಾಗಿ, ಮುಸುಕಿನ ಜೋಳ, ನೆಲಗಡಲೆ, ತೊಗರಿ, ಭತ್ತ ಸೇರಿದಂತೆ 34,554 ಹೆಕ್ಟೇರ್‌ ಕೃಷಿ ಬೆಳೆ ನಾಶವಾಗಿದೆ.

ತುಮಕೂರು ಜಿಲ್ಲೆಯಲ್ಲಿ ರಾಗಿ ಬೆಳೆ ನೆಲಕ್ಕೆ ಮಲಗಿದೆ. ಜಿಲ್ಲೆಯಲ್ಲಿ 14,500 ಸಾವಿರ ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳಲ್ಲಿಯೇ ಅಧಿಕ ಮಳೆ ಪ್ರಸಕ್ತ ವರ್ಷ ಸುರಿದಿದ್ದು, ಅಕ್ಟೋಬರ್‌ 9ರಿಂದ ನ.11ರವರೆಗೆ 905.25 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ಹಾನಿಯ ಒಟ್ಟು ಮೌಲ್ಯ ₹ 19.72 ಕೋಟಿ ಎಂದು ಅಂದಾಜಿಸಲಾಗಿದೆ. ಕೃಷಿ ಇಲಾಖೆ ಸಮೀಕ್ಷೆ ಪ್ರಕಾರ ಅಂದಾಜು 5,032 ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದೆ. ಭಾರಿ ಮಳೆ ಕಾರಣ ನ.19 ಮತ್ತು 20ರಂದು ಜಿಲ್ಲೆಯ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿದೆ.

ಬೆಳಗಾವಿ ಜಿಲ್ಲೆಯ ‘ಬೆಳಗಾವಿ, ಖಾನಾಪುರ ಹಾಗೂ ಚನ್ನಮ್ಮನ ಕಿತ್ತೂರು ತಾಲ್ಲೂಕುಗಳಲ್ಲಿ ಅಂದಾಜು 2,150 ಹೆಕ್ಟೇರ್‌ ಭತ್ತದ ಬೆಳೆಗೆ ಹಾನಿಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಕೃಷಿ ಕ್ಷೇತ್ರ ನಲುಗಿ ಹೋಗಿದೆ. ಕರಾವಳಿ, ಘಟ್ಟದ ಮೇಲಿನ ತಾಲ್ಲೂಕುಗಳ ಭತ್ತದ ಬೆಳೆ ಬಹುದೊಡ್ಡ ಪ್ರಮಾಣದ ನಷ್ಟ ಅನುಭವಿಸಿದೆ. ಒಟ್ಟು 894.9 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಶವಾಗಿದೆ. ಕೊಯ್ಲಿಗೆ ಸಿದ್ಧವಾಗಿದ್ದ ಸಸಿಗಳು ಕೊಚ್ಚಿಹೋಗಿವೆ. ಕೊಯ್ಲು ಮಾಡಲಾಗಿದ್ದ ಸಾವಿರ ಕ್ವಿಂಟಲ್‍ಗೂ ಹೆಚ್ಚು ಮೆಕ್ಕೆಜೋಳ ಮಳೆನೀರಿಗೆ ಹಾಳಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಟಾವಿಗೆ ಬಂದ ಭತ್ತದ ಬೆಳೆ ನೆಲಕ್ಕುರುಳುತ್ತಿದೆ. ಮೆಕ್ಕೆಜೋಳದ ತೆನೆಗಳು ಮೊಳಕೆಯೊಡೆಯುತ್ತಿವೆ. ಜಿಲ್ಲೆಯಲ್ಲಿ 1,33,931 ಹೆಕ್ಟೇರ್‌ ಕೃಷಿ ಬೆಳೆ ಕ್ಷೇತ್ರವಿದೆ. 78,100 ಹೆಕ್ಟೇರ್ ಭತ್ತ, 52 ಸಾವಿರ ಹೆಕ್ಟೇರ್ ಮೆಕ್ಕೆಜೋಳ ಬೆಳೆಯಲಾಗಿದೆ. ಶೇ 90ರಷ್ಟು ಭತ್ತ, ಮೆಕ್ಕೆಜೋಳದ ಬೆಳೆ ಕಟಾವಿಗೆ ಬಂದಿದೆ. ಮಳೆ ಬಿಡುವು ನೀಡದ ಕಾರಣ ಹೊಲಗಳಲ್ಲಿ ನೀರು ನಿಂತು ಕಟಾವಿಗೆ ಅಡ್ಡಿಯಾಗಿದೆ. ಮಳೆಯಿಂದಾಗಿ 78 ಹೆಕ್ಟೇರ್‌ ಭತ್ತ, 13 ಹೆಕ್ಟೇರ್ ಮೆಕ್ಕೆಜೋಳ, 2 ಹೆಕ್ಟೇರ್ ಭತ್ತದ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ. ಕಿರಣ್‌ ಕುಮಾರ್ ಮಾಹಿತಿ ನೀಡಿದರು.

ಹಾಸನ ಜಿಲ್ಲೆಯಲ್ಲಿ ಕಟಾವಿಗೆ ಬಂದಿದ್ದ ರಾಗಿ, ಮೆಕ್ಕೆಜೋಳಕ್ಕೆ ಹೆಚ್ಚು ಹಾನಿಯಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ 675 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ನೆಲಕಚ್ಚಿದ್ದರೆ, 19,403 ಹೆಕ್ಟೇರ್ ರಾಗಿ ಹಾಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT