ಬೆಂಗಳೂರು: ಕಲಬುರ್ಗಿ ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರ ವಿರುದ್ಧದ ಖಾಸಗಿ ದೂರನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಹಿಂದೆ ಬಳ್ಳಾರಿಯಲ್ಲಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾಗಿದ್ದ ಜೆ.ಎಸ್. ವಿಜಯಕುಮಾರ್ ಮತ್ತು ಇತರೆ ಒಂಬತ್ತು ಮಂದಿ ವಿರುದ್ಧ ಸಿ.ಎಂ. ಮಂಜುನಾಥ್ ಎಂಬುವರು ಖಾಸಗಿ ದೂರು ದಾಖಲಿಸಿದ್ದರು.
ಮಂಜುನಾಥ್ ವಿರುದ್ಧ ಸ್ವಯಂ ಪ್ರೇರಿತ ಕ್ರಿಮಿನಲ್ ಅರ್ಜಿ ದಾಖಲಿಸಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ನ್ಯಾಯಾಧೀಶರು ಯಾರದೇ ಭಯ ಅಥವಾ ಯಾರದೇ ಪರ ಕೆಲಸ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು.
‘ನ್ಯಾಯಾಧೀಶರ ಸಂಪೂರ್ಣ ರಕ್ಷಣೆಯ ಅವಕಾಶ ಕಾನೂನಿನಲ್ಲಿ ಇದೆ. ಹೀಗಾಗಿ, ಖಾಸಗಿ ದೂರು ದಾಖಲಿಸುವುದಕ್ಕೆ ಉತ್ತೇಜನ ನೀಡುವುದಿಲ್ಲ. ಉಳಿದವರ ವಿರುದ್ಧದ ಪ್ರಕರಣ ಮುಂದುವರಿಸಲಾಗುವುದು’ ಎಂದು ತಿಳಿಸಿತು.
‘ಪ್ರಕರಣವೊಂದನ್ನು ವಾಪಸ್ ಪಡೆಯದ ಕಾರಣಕ್ಕೆ ಬೇರೆ ಪ್ರಕರಣದಲ್ಲಿ ನನ್ನನ್ನು 14 ದಿನಗಳ ಕಾಲ ನ್ಯಾಯಾಧೀಶರು ಜೈಲಿಗೆ ಕಳುಹಿಸಿದ್ದರು’ ಎಂಬುದು ಮಂಜುನಾಥ್ ಅವರ ಆರೋಪವಾಗಿತ್ತು.