ಧಾರವಾಡ: ತಾಲ್ಲೂಕಿನ ನಿಗದಿ ಬಳಿ ಶನಿವಾರ ನಸುಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಅವಘಡದಲ್ಲಿಗಾಯಗೊಂಡಿರುವ 13 ಮಂದಿಯನ್ನು ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ.
ನಿಶ್ಚಿತಾರ್ಥದಲ್ಲಿ ಪಾಲ್ಗೊಂಡು ಕ್ರೂಸರ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಮೃತರಲ್ಲಿ ಮೂವರು ಮಕ್ಕಳು ನಾಲ್ವರು ಮಹಿಳೆಯರು ಸೇರಿದ್ದಾರೆ.
ಐದು ವರ್ಷದ ಆರಾಧ್ಯಾ, 13 ವರ್ಷದ ಮುತ್ತು ಮರಿಗೌಡರ, 13 ವರ್ಷದ ಸಾಗರ ದಾಸನಕೊಪ್ಪ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಚಾಲಕ ವಿನಾಯಕ ಕಮ್ಮಾರ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.
ಕ್ರೂಸರ್ ಬೆನಕನಕಟ್ಟಿ ಗ್ರಾಮದ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದೆ. ಊಟಕ್ಕೆ ಕುಳಿತಿದ್ದ ಮಾಲೀಕನಿಂದ ಬಲವಂತವಾಗಿ ಕೀಲಿಕೈ ಪಡೆದ ವಿನಾಯಕ ವಾಹನ ಚಾಲನೆ ಮಾಡುತ್ತಿದ್ದ. ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಬಲಭಾಗದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕೆಲವೊಂದು ಬಿಡಿಭಾಗಗಳು ವಾಹನದಿಂದ ಬೇರ್ಪಟ್ಟಿವೆ.
ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಗ್ರಾಮಸ್ಥರ ನೆರವಿನೊಂದಿಗೆ ಮೃತದೇಹ ಮತ್ತು
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಪ್ರತಿಕ್ರಿಯಿಸಿ, ‘ರಾತ್ರಿ 1.30ರ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ತನಿಖೆ ನಡೆಸಿ ಅಪಘಾತಕ್ಕೆ ಕಾರಣ ಪತ್ತೆ ಮಾಡಲಾಗುವುದು’ ಎಂದು ತಿಳಿಸಿದರು.
ಮೃತರ ವಿವರ:ಮನುಶ್ರೀ ದಾಸನಕೊಪ್ಪ (16) ದೊಡ್ಡವಾಡದ ಅನನ್ಯಾ ಹುತಮಲ್ನವರ (14), ಧಾರವಾಡದ ಹರೀಶ ಅಂಗಡಿ (13), ಗೋವನ ಕೊಪ್ಪದ ಮಹೇಶ್ವರ ತೋಟದ (11), ಮಧುಶ್ರೀ ದಾಸನಕೊಪ್ಪ (20), ಶಿಲ್ಪಾ ದಾಸನಕೊಪ್ಪ (34), ನೀಲವ್ವ ದಾಸನಕೊಪ್ಪ (60), ಶಂಭುಲಿಂಗಯ್ಯ ಹಿರೇಮಠ (35) ಸ್ಥಳದಲ್ಲೇ ಮೃತಪಟ್ಟರೆ, ಚೆನ್ನವ್ವ ಬಂಕಾಪುರ (45) ಹುಬ್ಬಳ್ಳಿಯ ಕಿಮ್ಸ್ನಲ್ಲಿ ಮೃತಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.