ಧಾರವಾಡ: ‘ಸೌಹಾರ್ದ ಕದಡಿರುವ ಈ ಹೊತ್ತಿನಲ್ಲಿ ಭಾವೈಕ್ಯ ಸಾರುವಲ್ಲಿ ಭಾರತೀಯ ಸಂಗೀತವು ಮುಖ್ಯ ಪಾತ್ರವನ್ನು ವಹಿಸುತ್ತಿದೆ’ ಎಂದು ಭಾಷಾತಜ್ಞ ಡಾ.ಗಣೇಶ ಎನ್.ದೇವಿ ಅವರು ಅಭಿಪ್ರಾಯಪಟ್ಟರು.
ಸಿತಾರ್ ನವಾಜ್ ಉಸ್ತಾದ್ ಬಾಲೇಖಾನ್ ಸ್ಮಾರಕ ಪ್ರತಿಷ್ಠಾನ ಟ್ರಸ್ಟ್,ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್, ಇನ್ಫೊಸಿಸ್ ಹಾಗೂ ಎಲ್ಐಸಿ ಸಹಯೋಗದಲ್ಲಿ ಭಾನುವಾರ ಇಲ್ಲಿ ನಡೆದ ‘ಬಾಲೇಖಾನ್ ಅವರ ಪುಣ್ಯಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯುದ್ಧ, ದ್ವೇಷ, ಅಸೂಯೆಗಳೇ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಎಲ್ಲವನ್ನೂ, ಎಲ್ಲರನ್ನೂ ಒಳಗೊಳ್ಳುವ ಸಂಗೀತದ ಅವಶ್ಯಕತೆಯಿದೆ. ಧಾರವಾಡ ಘರಾಣೆ ಹುಟ್ಟಿಗೆ ಕಾರಣರಾದ ಖಾನ್ ಕುಟುಂಬದ ಸಂಗೀತ ಸೇವೆ ಸೌಹಾರ್ದ ಸಮಾಜಕ್ಕೆ ಮಾದರಿಯಾಗಿದೆ’ ಎಂದರು.
ಸಿತಾರ್ ನವಾಜ್ ಉಸ್ತಾದ್ ಬಾಲೆ ಖಾನ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿನಾಯಕ ತೊರವಿ, ‘ಧಾರವಾಡದ ಸಂಗೀತ ಪ್ರೀತಿಯನ್ನು ತೋರಿಸುವ ಉದ್ದೇಶದಿಂದಲೇ ಬೆಂಗಳೂರಿನಲ್ಲಿ ಧಾರವಾಡ ಹೆಸರಿನ ಸಂಗೀತ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇನೆ’ ಎಂದರು.
ನಂತರ ಹಿರಿಯ ಸಂಗೀತ ಗಾಯಕರು ಹಾಗೂ ಕಲಾವಿದರಿಂದ ಬೆಳಿಗ್ಗೆಯಿಂದ ರಾತ್ರಿಯವರೆಗೂ ನಿರಂತರ ಸಂಗೀತ ಕಾರ್ಯಕ್ರಮ ಜರುಗಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.