ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲಾ ನಗರಗಳಿಗೂ ‘ಸೇಫ್‌ ಸಿಟಿ’ ವಿಸ್ತರಣೆ: ಬಸವರಾಜ ಬೊಮ್ಮಾಯಿ

ಅಂತರರಾಷ್ಟ್ರೀಯ ಮಹಿಳಾ ದಿನ: ಕಿತ್ತೂರು ರಾಣಿ ಚೆನ್ನಮ್ನ ಪ್ರಶಸ್ತಿ ಪ್ರದಾನ
Last Updated 8 ಮಾರ್ಚ್ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಸುರಕ್ಷತೆಗೆ ಬೆಂಗಳೂರಿನಲ್ಲಿ ಸೇಫ್‌ ಸಿಟಿ(ಸುರಕ್ಷಿತ ನಗರ) ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯನ್ನು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

‘ಮಹಿಳೆಯರ ಸುರಕ್ಷತೆಗೆ ಸರ್ಕಾರ ಆದ್ಯತೆ ನೀಡಿದೆ. ಬೆಂಗಳೂರಿನಲ್ಲಿ ಸುರಕ್ಷಿತ ನಗರ ಯೋಜನೆಗೆ ಚಾಲನೆ ನೀಡಿ ಏಳು ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಮಾಂಡ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, 400 ವಾಹನಗಳನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ಮೊದಲ ಹಂತದಲ್ಲಿ ಎಲ್ಲಾ ಮಹಾನಗರಗಳಿಗೆ ವಿಸ್ತರಿಸಲಾಗುವುದು. ನಂತರದ ದಿನಗಳಲ್ಲಿ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲೂ ಅನುಷ್ಠಾನಗೊಳಿಸಲಾಗುವುದು’ ಎಂದು ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ‌‘ಸರ್ಕಾರದಲ್ಲಿ ಪುಣ್ಯದ ಕೆಲಸ ಮಾಡುವ ಯಾವುದಾದರೂ ಇಲಾಖೆಯಿದ್ದರೆ ಅದು ನಮ್ಮ ಇಲಾಖೆ. ಕಟ್ಟಕಡೆಯ ಮಹಿಳೆಯರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುತ್ತಿದೆ’ ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ: ಗದಗ ಜಿಲ್ಲೆಯ ವೀರರಾಣಿ ಕಿತ್ತೂರು ಚನ್ನಮ್ಮ ಮಹಿಳಾ ಸಂಸ್ಥೆ, ಕಲಬುರಗಿಯ ‌ಸಾಯಿ ಸಮರ್ಥ ಗೃಹ ಉದ್ಯೋಗ, ವಿಜಯಪುರದ ವಿಜಯಲಕ್ಷ್ಮಿ ಎಜುಕೇಷನ್ ಮತ್ತು ಸೋಷಿಯಲ್ ವೆಲ್‌ಫೇರ್ ಸೊಸೈಟಿ, ಕೊಪ್ಪಳದ ಮಹಿಳಾ ಧ್ವನಿ ಶಿಕ್ಷಣ ಹಾಗೂ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ, ಕಾರ್ಕಳದ ಶ್ರೀಮತಿ ಯಶೋದಾ ಎಸ್‌.ಶೆಟ್ಟಿ ಅಜೆಕಾರು ಚೈತ್ರ ಕುಟೀರ, ಗೊರಗುಂಟೆಪಾಳ್ಯದ ಪ್ರೇರಣ ರಿಸೋರ್ಸ್‌ ಸೆಂಟರ್‌ಗಳಿಗೆ ಕಿತ್ತೂರು ರಾಣಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವ್ಯಕ್ತಿ ಪ್ರಶಸ್ತಿ ವಿಭಾಗದಲ್ಲಿ ದಾವಣಗೆರೆಯ ಜಯಮ್ಮ ಎಲ್‌.ಆರುಂಡಿ, ಮಂಡ್ಯದ ಟಿ.ಸಿ.ವಸಂತಾ, ಚಿಕ್ಕಬಳ್ಳಾಪುರದ ರತ್ನಮ್ಮ, ಕಲಬುರಗಿಯ ಎಂ.ಭಾಗ್ಯಲಕ್ಷ್ಮಿ, ಕೊಡಗಿನ ಗೀತಾ ಚೆಂಗಪ್ಪ, ಉಡುಪಿಯ ಸುಮಂಗಲಾ ಡಿ.ಕೋಟಿ, ಕೋಲಾರದ ಎನ್‌.ಸುಲೋಚನಾ ನೀಡಲಾಯಿತು. ಕಲಾ ಪ್ರಶಸ್ತಿಯನ್ನು ಬೆಂಗಳೂರಿನ ಹಂಸಿಕಾ ವಿನಾಯಕ, ಶಿವಮೊಗ್ಗದ ಸಿ.ಡಿ.ರಕ್ಷಿತಾ, ಕೊಪ್ಪಳದ ಅನ್ನಪೂರ್ಣ ಎಂ.ಮನ್ನಾಪೂರ, ಉಡುಪಿಯ ಪವನ ಬಿ.ಆಚಾರ್, ಹಾವೇರಿಯ ಭಾರತಿ ವರ್ಧಮಾನ ಛಬ್ಬಿ, ಸಾಹಿತ್ಯ ಪ್ರಶಸ್ತಿಯನ್ನು ದಾವಣಗೆರೆಯ ಸುಕನ್ಯಾ ತ್ಯಾವಣಗಿ, ಗದಗದ ಜ್ಯೋತಿ ಎಂ.ಲೋಟಿ, ಕೊಪ್ಪಳದ ವಾಣಿಶ್ರೀ ಪಾಟೀಲ ಗುಂಡೂರು, ಕ್ರೀಡಾ ಪ್ರಶಸ್ತಿಯನ್ನು ಬಾಗಲಕೋಟೆಯ ಚಂದನಾ ವಿ.ಗರಸಂಗಿ, ಧಾರವಾಡದ ನಿಧಿ ಶಿವರಾಮು ಸುಲಾಖೆ ಅವರಿಗೆ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT