ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈಗೆ ಕರೆದೊಯ್ದವರೇ ಸಿ.ಡಿ ಮಾಡಿದ್ರಾ: ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ

Last Updated 10 ಮಾರ್ಚ್ 2021, 2:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ ಎಂದು ಪ್ರಶ್ನಿಸಿದ್ದಾರೆ.

‘ಮುಂಬೈಗೆ ಹೋದ 12 ಮಂದಿಯದ್ದೂ ಸಿ.ಡಿಗಳಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಮುಂಬೈಗೆ ಕರೆದುಕೊಂಡು ಹೋದವರೇ ಇದನ್ನೆಲ್ಲಾ ಮಾಡಿದರೋ? ಸಿನಿಮಾ ರಂಗದ ಪರಿಣಿತರೂ ಜತೆಯಲ್ಲೇ ಇದ್ದರು. ಅವರೇನಾದರೂ ಮಾಡಿರಬಹುದಾ’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿ.ಡಿಯಲ್ಲಿ ಇದ್ದಾರೆ ಎನ್ನಲಾದ ಯುವತಿಯನ್ನು ಸಂತ್ರಸ್ತೆ ಎನ್ನುತ್ತಿದ್ದೀರಿ. ಆ ಹೆಣ್ಣು ಮಗಳು ಭೇಟಿ ನೀಡಿದ ಸ್ಥಳದ ವಿವರ, ಆಕೆಯ ಭಾವಚಿತ್ರವನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಲಾಗಿದೆ. ಆಕೆ ಸಂತ್ರಸ್ತಳಾಗಿದ್ದು, ಅವರ ಕುಟುಂಬಕ್ಕೆ ನಿಜವಾಗಿಯೂ ಕಿರುಕುಳ ಆಗಿದ್ದರೆ ಸಾರ್ವಜನಿಕವಾಗಿ ಬಂದು ದೂರು ನೀಡಬೇಕಿತ್ತಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

‘ಈ ಘಟನೆಯಿಂದ ನೊಂದುಕೊಂಡ ಆಕೆಯ ಕುಟುಂಬವನ್ನು ಸಂತ್ರಸ್ತರು ಎನ್ನಬೇಕೋ? ಯುವತಿಯನ್ನೇ ಸಂತ್ರಸ್ತೆ ಎನ್ನಬೇಕೋ? ಸಿ.ಡಿ ನಕಲಿ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಅವರನ್ನು, ಅವರ ಸಹೋದರರು, ಪತ್ನಿ ಮತ್ತು ಕುಟುಂಬದ ಸದಸ್ಯರನ್ನು ಸಂತ್ರಸ್ತರು ಎನ್ನಬೇಕೋ’ ಎಂದು ಕುಮಾರಸ್ವಾಮಿ ಕೇಳಿದ್ದಾರೆ.

ಸಲಹೆ ಕೊಟ್ಟವರಾರು?

‘ಆರು ಮೇಧಾವಿ ಸಚಿವರು ತಮ್ಮ ಸಿ.ಡಿ ಬಿಡುಗಡೆ ಮಾಡದಂತೆ ನ್ಯಾಯಾಲಯದಿಂದ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ಈ ಸಲಹೆ ಕೊಟ್ಟವರು ಯಾರು ಎಂಬುದು ಪ್ರಶ್ನೆ. ಸಚಿವರಿಗೆ ಸ್ವಯಂ ಆತ್ಮವಿಶ್ವಾಸ ಇದ್ದಿದ್ದರೆ ತಡೆ ತರುವ ಪ್ರಶ್ನೆ ಏಕೆ ಉದ್ಭವಿಸುತ್ತಿತ್ತು’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಇವೆಲ್ಲವೂ ವ್ಯಕ್ತಿಯ ಖಾಸಗಿ ಬದುಕಿನ ಹವ್ಯಾಸಕ್ಕೆ ಸಂಬಂಧಿಸಿದ ವಿಷಯಗಳು. ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಸಂಗತಿಯನ್ನು ರೆಕಾರ್ಡ್‌ ಮಾಡಿ ರಾಜಕೀಯಕ್ಕೆ ಬಳಸುವ ಕೆಲಸವನ್ನು ನಮ್ಮ ಕುಟುಂಬ ಎಂದೂ ಮಾಡಿಲ್ಲ. ನಾನು ಕೂಡ ಒಮ್ಮೆ ತಪ್ಪು ಮಾಡಿದ್ದೆ. ವಿಧಾನಸಭೆಯಲ್ಲೇ ಅದನ್ನು ಒಪ್ಪಿಕೊಂಡಿದ್ದೇನೆ. ತಿದ್ದಿಕೊಂಡು ನಡೆಯುವುದು ಮುಖ್ಯ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT