ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರದಲ್ಲಿ ಜೆಡಿಎಸ್‌ ಪ್ರಬಲ, ಶೀಘ್ರ ಸೂಕ್ತ ನಾಯಕನ ಆಯ್ಕೆ: ನಿಖಿಲ್

Last Updated 30 ಮಾರ್ಚ್ 2021, 10:38 IST
ಅಕ್ಷರ ಗಾತ್ರ

ಕನಕಪುರ: ಕನಕಪುರ ಕ್ಷೇತ್ರವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪಕ್ಷ ಸಂಘಟಿಸಲು ಸೂಕ್ತ ವ್ಯಕ್ತಿಯನ್ನು ಆಯ್ಕೆಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಹಾರೋಹಳ್ಳಿ ಹೋಬಳಿ ಚೀಲೂರು ಗ್ರಾಮಕ್ಕೆ ಕಾರ್ಯಕರ್ತರು ಹಾಗೂ ಗ್ರಾಮದ ಮುಖಂಡರನ್ನು ಭೇಟಿಯಾಗಲು ಬಂದಿದ್ದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಜತೆ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೆ ಇಲ್ಲ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪ್ರಬಲ ವಿರೋಧಿ ಪಕ್ಷ. ನಮ್ಮ ಪಕ್ಷವು ಇಲ್ಲಿ ಸದೃಢವಾಗಿದೆ. ಹೀಗಿರುವಾಗ ಪಕ್ಷದ ಅಭಿಮಾನಿಗಳನ್ನು ಬಿಟ್ಟುಕೊಡಲು ಆಗುತ್ತದಾ’ ಎಂದು ಪ್ರಶ್ನಿಸಿದರು.

‘ಹಿಂದಿನ ಅನಿವಾರ್ಯ ಸಂದರ್ಭದಲ್ಲಿ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಆದರೆ, ಇಂದು ಪಕ್ಷ ಕನಕಪುರದಲ್ಲಿ ಕಾಂಗ್ರೆಸ್‌ ಜತೆಗೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಇದು ನಮ್ಮ ಪಕ್ಷದ ಭದ್ರಕೋಟೆಯಾಗಿತ್ತು ಎಂದು ಹೇಳಿದರು.

ನಮ್ಮ ಪಕ್ಷ ಈಗಲು ಕನಕಪುರದಲ್ಲಿ ಸದೃಡವಾಗಿದೆ. ಮತ್ತೊಮ್ಮೆ ಪಕ್ಷವನ್ನು ಸಂಘಟಿಸುತ್ತೇವೆ. ನಮ್ಮ ಕಾರ್ಯಕರ್ತರು ಮುಖಂಡರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು’ ಎಂದು ಹೇಳಿದರು.

’ತಾಯಿಯವರ ಪರವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ. ಯಾವುದೆ ದುರುದ್ದೇಶವಿಲ್ಲ, ಈಗ ಬೇಸಿಗೆ ಪ್ರಾರಂಭವಾಗಿರುವುದರಿಂದ ಮುಂದೆ ನೀರಿಗೆ ಅಭಾವ ಬರಬಹುದು ಅದಕ್ಕಾಗಿ ಪಕ್ಷದ ವತಿಯಿಂದ ಟ್ಯಾಂಕರ್‌ ಖರೀದಿಸಿ ಕೊಡಲಾಗುವುದು, ಎರಡು ಹೋಬಳಿಯ ಜನತೆ ಇದನ್ನು ಬಳಸಿಕೊಳ್ಳಬಹುದು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಿ.ಎಸ್‌.ಭುಜಂಗಯ್ಯ, ಜೆಡಿಎಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎನ್‌.ರಾಮು, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೆ.ಎನ್. ಲಕ್ಷ್ಮಣ್‌, ಮಾಜಿ ಸದಸ್ಯ ಈರೇಗೌಡ, ಮುಖಂಡರಾದ ಬನ್ನಿಕುಪ್ಪೆ ರಾಜು, ಮೇಡಮಾರನಹಳ್ಳಿ ಕುಮಾರ್‌, ಹುಲಿಸಿದ್ದೇಗೌಡನದೊಡ್ಡಿ ಸಿದ್ದಪ್ಪ, ಮಲ್ಲಯ್ಯ, ಪಡುವಣಗೆರೆ ಸಿದ್ದರಾಜು, ಶಿವಾನಂದ, ಚಿಲೂರು ಮುನಿರಾಜು, ಮುದುವಾಡಿ ನಾಗರಾಜು ಇದ್ದರು.

‘ಕ್ಷಮೆ ಕೇಳಲು ಬಂದಿದ್ದೇನೆ’

‘ಕೆಲವು ದಿನಗಳ ಹಿಂದೆ ಚೀಲೂರು ಗ್ರಾಮಕ್ಕೆ ಬಂದಾಗ ವೇದಿಕೆಯಲ್ಲಿ ಮಾತನಾಡುತ್ತಿದ್ದಾಗ ಕೆಲವರು ಗೊಂದಲ ಸೃಷ್ಠಿಸಿ ಮುಜುಗರ ಪಡಿಸಿದರು. ನಾನು ಅವರಿಗೆ ಹೇಳಿದೆ, ಮಾತನಾಡಲು ಅವಕಾಶವಿದೆ. ಆ ಸಮಯದಲ್ಲಿ ಮಾತನಾಡಿ ಅಂತ. ಆದರೂ ಸ್ವಲ್ಪ ಗೊಂದಲವಾಯಿತು. ಅಂದು ನನ್ನಿಂದ ಕಾರ್ಯಕ್ರಮಕ್ಕೆ ತೊಂದರೆ ಆಗಿರಬಹುದೆಂದು ಕ್ಷಮೆ ಕೇಳಲು ಇಂದು ಬಂದಿದ್ದೇನೆ’ ಎಂದರು.

‘ತಾತನವರು ಮತ್ತು ಕುಮಾರಣ್ಣ ಹರದನಹಳ್ಳಿಯಲ್ಲಿ ಜನಿಸಿದ್ದರೂ ರಾಮನಗರ ಕ್ಷೇತ್ರವು ಅವರಿಗೆ ರಾಜಕೀಯ ಜನ್ಮವನ್ನು ನೀಡಿದೆ. ಅಪಾರ ಪ್ರೀತಿ ಕೊಟ್ಟಿದ್ದೀರಿ, ನಮ್ಮ ತಾಯಿಯವರನ್ನು ಶಾಸಕರನ್ನಾಗಿ ಮಾಡಿದ್ದೀರಿ, ನನ್ನ ಮೇಲೂ ಪ್ರೀತಿ ತೋರುತ್ತಿದ್ದೀರಿ. ನಾನು ನಿಮ್ಮ ಮನೆಯ ಮಗನಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT