ಬೆಂಗಳೂರು: ‘ದನಿ ಇಲ್ಲದವರ ಧ್ವನಿ’ ಯಾಗಿದ್ದ ಕವಿ ಡಾ.ಸಿದ್ಧಲಿಂಗಯ್ಯರವರು ನಿಧನರಾಗಿ ವರ್ಷವಾಗಿದ್ದು, ಶನಿವಾರ ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಕಲಾಗ್ರಾಮದಲ್ಲಿ ಸ್ಮರಣಾ ಕಾರ್ಯಕ್ರಮ ನಡೆಯಿತು.
ಇಡೀ ಕಲಾಗ್ರಾಮ ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗಿತ್ತು.ಅವರ ಒಡನಾಡಿಗಳು, ಅಭಿಮಾನಿಗಳು, ವಿದ್ಯಾರ್ಥಿಗಳು ಸ್ಮರಿಸಿದರು. ಕಾವ್ಯ ವಾಚನ, ಗಾಯನದ ಮೂಲಕ ಬಂಡಾಯ ಕವಿಯನ್ನೂ ನೆನಪಿಸಿದರು.
60 ಮಂದಿ ಬರಹಗಾರರ ‘ಸಾವಿರಾರು ದನಿಗಳು’ (ಸಂಪಾದಕ –ಡಾ.ಶಿವರಾಜ್ ಬ್ಯಾಡರಹಳ್ಳಿ, ಮುದಲ್ ವಿಜಯ್) ಹಾಗೂ ಸಿದ್ಧಲಿಂಗಯ್ಯ ಅವರ ಭಾಷಣದ ‘ಆಕಾಶದ ಅಗಲಕ್ಕೂ ನಿಂತ ಆಲವೇ’ (ಸಂಪಾದಕಿ – ಡಾ.ಸಿ.ಶೋಭಾ) ಕೃತಿಗಳ ಲೋಕಾರ್ಪಣೆಯ ಮೂಲಕ ಗೌರವ ಸಲ್ಲಿಸಲಾಯಿತು.
ಸಚಿವರಾದ ವಿ.ಸೋಮಣ್ಣ, ಮುನಿರತ್ನ, ವಿಧಾನ ಪರಿಷತ್ ಸದಸ್ಯ ಮೋಹನ್ ಕೊಂಡಜ್ಜಿ, ಚಿಂತಕ ಶೂದ್ರ ಶ್ರೀನಿವಾಸ, ವಿಮರ್ಶಕ ಡಾ.ಬೈರಮಂಗಲ ರಾಮೇಗೌಡ ಅವರು ಸಿದ್ಧಲಿಂಗಯ್ಯ ಅವರೊಂದಿನ ಒಡನಾಟವನ್ನು ಸ್ಮರಿಸಿದರು. ಸಮಾಧಿ ಸ್ಥಳದಲ್ಲಿ ಬುದ್ಧ ವಂದನೆ ನಡೆಯಿತು.
ಸಚಿವ ವಿ.ಸೋಮಣ್ಣ ಮಾತನಾಡಿ, ‘ನೋವಿನಿಂದಲೇ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಸಿದ್ಧಲಿಂಗಯ್ಯ ಅವರು ತಮ್ಮ ಸಾಹಿತ್ಯದಿಂದ ಸಮಾಜದ ಓರೆ–ಕೋರೆ ತಿದ್ದಲು ಪ್ರಯತ್ನಿಸಿದವರು. ಅವರ ಕವಿತೆಗಳನ್ನು ಡಿಜಿಟಲ್ ರೂಪದಲ್ಲಿ ಹೊರತಂದರೆ ಆರ್ಥಿಕ ನೆರವು ಒದಗಿಸಲಾಗುವುದು’ ಎಂದರು.
‘₹ 1 ಕೋಟಿ ಅನುದಾನ, ಭೂಮಿ ಮಂಜೂರು’ ‘ಕವಿ ಸಿದ್ಧಲಿಂಗಯ್ಯ ನೆನಪಿನಲ್ಲಿ ಸ್ಥಾಪಿಸಲಿರುವ ಗ್ರಂಥಾಲಯಕ್ಕೆ ₹ 1 ಕೋಟಿ ಅನುದಾನ, ಭೂಮಿ ಮಂಜೂರಾತಿ ಹಾಗೂ ವೈಯಕ್ತಿಕವಾಗಿ ಆರ್ಥಿಕ ನೆರವು ಒದಗಿಸಲಾಗುವುದು’ ಎಂದು ಸಚಿವರಾದ ವಿ. ಸೋಮಣ್ಣ ಮತ್ತು ಮುನಿರತ್ನ ಭರವಸೆ ನೀಡಿದರು.
‘ಕಲಾಗ್ರಾಮದಲ್ಲಿ ಸಮಾಧಿ ಸ್ಥಳದಲ್ಲಿ ನೆನಪಿನಲ್ಲಿ ಉಳಿಯುವಂತಹ ಯೋಜನೆ ರೂಪಿಸಲಾಗುವುದು’ ಎಂದು ಸೋಮಣ್ಣ ಹೇಳಿದರು. ‘ಸಿದ್ಧಲಿಂಗಯ್ಯ ಹೆಸರಿನ ಟ್ರಸ್ಟ್ಗೆ ಜಮೀನು ನೀಡಿದರೆ ಗ್ರಂಥಾಲಯ ನಿರ್ಮಿಸಲಾಗುವುದು’ ಎಂದು ಮೇಲ್ಮನೆ ಸದಸ್ಯ ಮೋಹನ್ ಕೊಂಡಜ್ಜಿ ಹೇಳಿದರು.