ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕು ಟಿ.ಚನ್ನಾಪುರ ಗ್ರಾಮದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆಯರು ಅಶ್ಲೀಲ ನೃತ್ಯ ಪ್ರದರ್ಶಿಸಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಬಿಜೆಪಿ, ‘ಮಂಚಮ್ಮದೇವಿ, ಮಸಣಮ್ಮದೇವಿ ಜಾತ್ರೆಯಲ್ಲಿ ಅಶ್ಲೀಲ ನೃತ್ಯ ಆಯೋಜಿಸಿದ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ ಗೌಡ ಕ್ರಮ ಖಂಡನೀಯ. ಶಾಸಕರ ಚಪಲಕ್ಕೆ ಜಾತ್ರೆಯೇ ಬೇಕಾಗಿದ್ದು ವಿಪರ್ಯಾಸ’ ಎಂದು ಟೀಕಿಸಿದೆ.
‘ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ ಎಂಬ ನಾಣ್ಣುಡಿ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ನವರಿಗೆ ಹೇಳಿ ಮಾಡಿಸಿದಂತಿದೆ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಮಂಚಮ್ಮದೇವಿ, ಮಸಣಮ್ಮದೇವಿ ಜಾತ್ರೆಯಲ್ಲಿ ಅಶ್ಲೀಲ ನೃತ್ಯ ಆಯೋಜಿಸಿದ ನಾಗಮಂಗಲದ @JanataDal_S ಶಾಸಕ ಸುರೇಶ ಗೌಡ ಕ್ರಮ ಖಂಡನೀಯ. ಶಾಸಕರ ಚಪಲಕ್ಕೆ ಜಾತ್ರೆಯೇ ಬೇಕಾಗಿದ್ದು ವಿಪರ್ಯಾಸ. ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ ಎಂಬ ನಾಣ್ಣುಡಿ @hd_kumaraswamy ಮತ್ತು @JanataDal_Sಗೇ ಹೇಳಿ ಮಾಡಿಸಿದಂತಿದೆ.
ಕಾರ್ಯಕ್ರಮದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನೃತ್ಯ ಕಲಾವಿದೆಯರು ಬಾಲಕನನ್ನು ವೇದಿಕೆಗೆ ಕರೆದು ಆತನೊಂದಿಗೆ ಆಶ್ಲೀಲವಾಗಿ ವರ್ತಿಸಿದ್ದಾರೆ.
‘ಊರ ಹಬ್ಬದಲ್ಲಿ ಕೀಳು ಅಭಿರುಚಿಯ ಕಾರ್ಯಕ್ರಮ ಆಯೋಜಿಸಲಾಗಿದೆ. ತುಂಡುಡುಗೆ ಧರಿಸಿ ಅಶ್ಲೀಲ ನೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಇದೊಂದು ನಂಗಾನಾಚ್ ಕಾರ್ಯಕ್ರಮವಾಗಿದೆ’ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.