ಸೋಮವಾರ, ಮಾರ್ಚ್ 20, 2023
30 °C
ʼದುರ್ಬಲ ಅಧ್ಯಕ್ಷ, ನೂರಾರು ಸಿಎಂ ಆಕಾಂಕ್ಷಿಗಳು: ಇದು ಕಾಂಗ್ರೆಸ್‌ ಕಥೆʼ

ಎತ್ತು ಏರಿಗೆ, ಕೋಣ ನೀರಿಗೆ, ಕಾಂಗ್ರೆಸ್‌ ಬೀದಿಗೆ!: ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, 'ಪ್ರಳಯ ಆದರೂ ಪಕ್ಷ ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳುವುದಿಲ್ಲ' ಎಂದು ಹೇಳುತ್ತಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು, 'ನಾನು ಅಧ್ಯಕ್ಷನಾಗಿ ಹೇಳುತ್ತಿದ್ದೇನೆ, ಪಕ್ಷ ಸೇರುವವರು ಅರ್ಜಿ ಸಲ್ಲಿಸಿ' ಎನ್ನುತ್ತಾರೆ. ಎತ್ತು ಏರಿಗೆ, ಕೋಣ ನೀರಿಗೆ, ಕಾಂಗ್ರೆಸ್‌ ಬೀದಿಗೆ ಬಿದ್ದಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

 

ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಿ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಕಾಂಗ್ರೆಸ್‌ನಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಟ್ವಿಟರ್‌ನಲ್ಲಿ ಗುಡುಗಿರುವ ಬಿಜೆಪಿ, 'ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪದಗ್ರಹಣ ಕಾರ್ಯಕ್ರಮ ನಡೆದು ವರ್ಷ ತುಂಬುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್‌ ಈಗ ಬಣ ರಾಜಕಾರಣದ ಗೂಡಾಗಿದೆ. ವಲಸೆ ನಾಯಕರು ಪ್ರಾಬಲ್ಯ ಮೆರೆಯುತ್ತಿರುವುದು ಮೂಲ ಕಾಂಗ್ರೆಸ್ಸಿಗರಿಗೆ ನುಂಗಲಾರದ ತುತ್ತಾಗಿದೆ. ದುರ್ಬಲ ಅಧ್ಯಕ್ಷ ಮತ್ತು ನೂರಾರು ಸಿಎಂ ಆಕಾಂಕ್ಷಿಗಳು, ಇದು ಕಾಂಗ್ರೆಸ್‌ ಕಥೆ!' ಎಂದಿದೆ.

 

 

ಮತ್ತೊಂದು ಟ್ವೀಟ್‌ನಲ್ಲಿ, 'ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಕಲಹ ಯಾವ ಹಂತಕ್ಕೆ ತಲುಪಿದೆ ಎಂದರೆ ಇವರಿಂದಾಗಿ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನವೂ ಎಐಸಿಸಿ ರಾಷ್ಟ್ರೀಯ ಅಧಕ್ಷ ಸ್ಥಾನದಂತೆ ಚಂಚಲವಾಗಿದೆ. ಇಬ್ಬರು ಆಕಾಂಕ್ಷಿಗಳು ಇಬ್ಬರು ನಾಯಕರ ಹಿಂದೆ ಜೋತು ಬಿದ್ದಿದ್ದಾರೆ. ಆ ಇಬ್ಬರು ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದಾರೆ' ಎಂದು ಛೇಡಿಸಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು