ಬೆಂಗಳೂರು: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಸುಗ್ರೀವಾಜ್ಞೆಮೂಲಕ ಜಾರಿಗೊಳಿಸುವ ಪ್ರಸ್ತಾವಕ್ಕೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್, ಇದು ಸಂವಿಧಾನ ವಿರೋಧಿ ನಡೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು, ‘ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಅನುಮೋದನೆ ಬಾಕಿ ಇದೆ. ಯಾವುದೇ ಚರ್ಚೆ ನಡೆಸದೇ, ಏಕಾಏಕಿ ಸುಗ್ರೀವಾಜ್ಞೆಹೊರಡಿಸುವ ಮೂಲಕ ಕಾಯ್ದೆಯನ್ನು ಜಾರಿ ತರುವ ತುರ್ತು ಮತ್ತು ಅನಿವಾರ್ಯತೆ ಸರ್ಕಾರಕ್ಕೆ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
‘ಸಂವಿಧಾನ ವಿರೋಧಿ ಹಾಗೂ ಸರ್ಕಾರದ ಹಿಂಬಾಗಿಲ ಕೃತ್ಯವನ್ನು ಘನವೆತ್ತ ರಾಜ್ಯಪಾಲರು ತಿರಸ್ಕರಿಸಬೇಕು. ವಿಧಾನ ಮಂಡಲದ ಗೌರವವನ್ನ ಉಳಿಸಬೇಕೆಂದು ಜನತೆಯ ಪರವಾಗಿ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.