ಬೆಂಗಳೂರು: ಹೋಟೆಲ್ಗಳ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಿರುವ ಸರ್ಕಾರ, ಎಲ್ಲ ಸೌಲಭ್ಯಗಳ ಸೇರಿ ವಿಧಿಸಬಹುದಾದ ಗರಿಷ್ಠ ಶುಲ್ಕವನ್ನುನಿಗದಿಮಾಡಿದೆ.
ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತ ಡಿ. ರಂದೀಪ್ ಸುತ್ತೋಲೆ ಹೊರಡಿಸಿದ್ದಾರೆ.ಸಾಮಾನ್ಯ ಹೋಟೆಲ್ಗೆ ದಿನವೊಂದಕ್ಕೆ ಗರಿಷ್ಠ ₹ 4 ಸಾವಿರ, ಮೂರು ಸ್ಟಾರ್ ಹೋಟೆಲ್ಗೆ ಗರಿಷ್ಠ ₹ 8 ಸಾವಿರ ಹಾಗೂ ಪಂಚತಾರಾ ಹೋಟೆಲ್ಗೆ ಗರಿಷ್ಠ ₹ 10 ಸಾವಿರ ನಿಗದಿಪಡಿಸಲಾಗಿದೆ.
ಕೋವಿಡ್ ಪೀಡಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಕೆಪಿಎಂಇ ಕಾಯ್ದೆಯಡಿ ಆರೈಕೆ ಕೇಂದ್ರಗಳನ್ನು ನಡೆಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ.ಹೋಟೆಲ್ನ ದರ್ಜೆಯ ಅನುಸಾರದರನಿಗದಿಮಾಡಲಾಗಿದೆ. ಸೋಂಕಿನ ಸೌಮ್ಯ ಹಾಗೂ ಮಧ್ಯಮ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡವರಿಗೆ ಚಿಕಿತ್ಸೆಯನ್ನು ಒದಗಿಸಬಹುದಾಗಿದೆ.
ಅಲ್ಲಿ ದಾಖಲಿಸಿಕೊಂಡವರ ಮಾಹಿತಿಯನ್ನು ಆರೋಗ್ಯ ಇಲಾಖೆ ಅಥವಾ ಬಿಬಿಬಿಎಂಪಿ ಅಧಿಕಾರಿಗಳಿಗೆ ಪ್ರತಿನಿತ್ಯ ಒದಗಿಸಬೇಕು ಎಂದು ಸೂಚಿಸಲಾಗಿದೆ.
ಕೋವಿಡ್ ಆರೈಕೆ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತರಬೇತಿ ಹೊಂದಿದ ಸಿಬ್ಬಂದಿಯನ್ನು ಆರೈಕೆಗೆ ನೇಮಿಸಬೇಕು. ಕಾಲ ಕಾಲಕ್ಕೆ ಸೋಂಕಿತರ ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿರಬೇಕು.ದಿನದ ಎಲ್ಲ ಅವಧಿಯಲ್ಲಿಯೂ ಆಂಬುಲೆನ್ಸ್ ಲಭ್ಯವಿರಬೇಕು. ಸೋಂಕಿತ ವ್ಯಕ್ತಿ ಚೇತರಿಸಿಕೊಂಡ ಬಳಿಕ ಮನೆಗೆ ಕಳುಹಿಸುವಾಗ ಸರ್ಕಾರದ ಮಾರ್ಗಸೂಚಿಯನ್ನೇ ಅನುಸರಿಸಬೇಕು ಎಂದು ತಿಳಿಸಲಾಗಿದೆ.