ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿದ್ದ ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಅವರು ಪ್ರಕರಣದ ವಿವರಣೆ ನೀಡಲು ಮುಂದಾಗುತ್ತಿದ್ದಂತೆಯೇ, ಎಸಿಬಿ ಪರ ವಕೀಲ ಪಿ.ಎನ್.ಮನ ಮೋಹನ್ ಅವರು, ‘ಈ ಪ್ರಕರಣ ದಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅವರನ್ನೂ ಆರೋಪಿಯನ್ನಾಗಿಮಾಡಲಾಗಿದೆ. ಪ್ರಕರಣ ರದ್ದು ಕೋರಿದ್ದ ಮಂಜುನಾಥ್ ಅವರ ಅರ್ಜಿಯಲ್ಲಿ ನಿನ್ನೆಯಷ್ಟೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಲು ನಿರಾಕರಿಸಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು. ಈ ಮಾತಿಗೆ ನ್ಯಾಯಮೂರ್ತಿಗಳು, ‘ಎಸಿಬಿ ಏಕೆ ರಚನೆಯಾಗಿದೆ ನಿಮಗೆ ಗೊತ್ತಾ, ಇವತ್ತು ಎಸಿಬಿಯೇ ಭ್ರಷ್ಟಾಚಾರದ ದಂಧೆ ನಡೆಸುತ್ತಿದೆ. ಸರ್ಕಾರ ಉದ್ದೇಶಪೂರ್ವಕವಾಗಿ ಕಳಂಕಿತರನ್ನು ಇಲ್ಲಿಗೆ ಹಾಕುತ್ತಿದೆ. ನೀವು ಕೇವಲ ಗುಮಾಸ್ತರ ವಿರುದ್ಧ ಕೇಸು ಬುಕ್ ಮಾಡುವುದಲ್ಲ’ ಎಂದು ಕಟು ಮಾತಿನಲ್ಲಿ ತರಾಟೆಗೆ ತೆಗೆದುಕೊಂಡರು.