ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮರಣ‌ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ: ಕರ್ನಾಟಕ ಜನಾರೋಗ್ಯ ಚಳುವಳಿ ಪತ್ರ

Last Updated 22 ಏಪ್ರಿಲ್ 2021, 12:19 IST
ಅಕ್ಷರ ಗಾತ್ರ

ಬೆಂಗಳೂರು:ಕೋವಿಡ್-19ನಿಂದಾಗಿ ಸಂಭವಿಸಬಹುದಾದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರವು ನಿಗದಿತವಾಗಿ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಕೆ.ಸುಧಾಕರ್‌ ಅವರಿಗೆ ಕರ್ನಾಟಕ ಜನಾರೋಗ್ಯ ಚಳವಳಿಪತ್ರ ಬರೆದಿದೆ.

ತಜ್ಞರು ಹಾಗೂ ಕೋವಿಡ್‌ ನಿಯಂತ್ರಣಕ್ಕಾಗಿ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವವರ ಜೊತೆ ನಡೆಸಿದಸಮಾಲೋಚನೆ ಆಧಾರದಲ್ಲಿ ಈ ಪತ್ರ ಬರೆಯಲಾಗಿದೆ.ಇವಿಷ್ಟನ್ನು ರಾಜ್ಯ ಸರ್ಕಾರವು ಜಾರಿಗೆ ತರಲೇಬೇಕು ಮತ್ತು ಪ್ರತಿದಿನ ಕೋವಿಡ್ ಪಾಸಿಟಿವ್ ಮತ್ತು ಸಾವುಗಳ ಸಂಖ್ಯೆ ಪ್ರಕಟಿಸುವ ರೀತಿಯಲ್ಲೇ ಈ ಕುರಿತೂ ವರದಿ ನೀಡಬೇಕೆಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದೆ.

ಪ್ರತಿದಿನ ಕೋವಿಡ್ ರೋಗಿಗಳ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಇರುವ ಹಾಸಿಗೆಗಳ ಮತ್ತು ವೆಂಟಿಲೇಟರ್ ಇರುವ ಐಸಿಯು ಹಾಸಿಗೆಗಳ ಕೊರತೆಯಿಂದಾಗಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ.ಮೇ ಮೊದಲ ವಾರದ ಹೊತ್ತಿಗೆ ಸ್ಫೋಟಕ ಪರಿಸ್ಥಿತಿ ಉಂಟಾಗಲಿದೆ ಎಂದು ತಜ್ಞರು ಹೇಳಿರುವುದು ಈಗಾಗಲೇ ವರದಿಯಾಗಿದೆ. ಜೊತೆಗೆ ರೋಗಿಗಳಲ್ಲಿ ಹಾಗೂ ಜನಸಾಮಾನ್ಯರಲ್ಲಿ ಭಾರೀ ಭೀತಿ ಉಂಟಾಗಿದೆ. ಇದನ್ನು ನಿಭಾಯಿಸುವುದು ಸರ್ಕಾರದ ಕರ್ತವ್ಯವಾಗಿದೆಎಂದು ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಕೆಳಗಿನ ಕ್ರಮಗಳನ್ನು ಸರ್ಕಾರ ಈ ತಕ್ಷಣ ಕೈಗೊಳ್ಳಲೇಬೇಕೆಂದು ಆಗ್ರಹಿಸುತ್ತೇವೆ ಮತ್ತು ಪ್ರತಿದಿನ ಈ ಸಂಬಂಧ ವರದಿಯನ್ನು ರಾಜ್ಯದ ಜನರ ಮುಂದೆ ಇಡಬೇಕೆಂದು ಒತ್ತಾಯಿಸುತ್ತೇವೆ ಎಂದೂ ಹೇಳಿದೆ.

1. ಈಗಿಂದೀಗಲೇ ಸರ್ಕಾರವು ಬೆಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಕ್ಸಿಜೆನ್ ಇರುವ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಬೆಂಗಳೂರಿನಲ್ಲಿ ದಿನಕ್ಕೆ ಕನಿಷ್ಠ 200 ಮತ್ತು ಜಿಲ್ಲಾ ಕೇಂದ್ರಗಳಲ್ಲಿ ದಿನಕ್ಕೆ 25 ಸಂಖ್ಯೆಯನ್ನು ಹೆಚ್ಚಿಸಬೇಕು.

2. ಸರ್ಕಾರವು ಪ್ರತಿದಿನ ಹೊಸದಾಗಿ ಎಲ್ಲಿ ಮತ್ತು ಎಷ್ಟು ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚು ಮಾಡಲಾಗಿದೆ ಎಂಬುದನ್ನು ಪ್ರಕಟಿಸಬೇಕು.

3. ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ 500 ಮತ್ತು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ತಲಾ 50ರಷ್ಟು ವೆಂಟಿಲೇಟರ್‌ಗಳನ್ನು ಇನ್ನೊಂದು ವಾರ ಕಾಲ ಹೆಚ್ಚಿಸಲು ಸಮರೋಪಾದಿ ಕ್ರಮಗಳನ್ನು ತೆಗೆದುಕೊಳ್ಳಬೇಕು.

4. ಆಕ್ಸಿಜನ್ ಕೊರತೆ ಇಲ್ಲವೆಂದು ಸರ್ಕಾರವು ಹೇಳಿರುವುದು ವರದಿಯಾಗಿದೆ. ಅದರ ಮೇಲೆ ವಿಶ್ವಾಸವಿಟ್ಟು, ಸರಬರಾಜಿನಲ್ಲಿ ಸಮಸ್ಯೆ ಆಗದಂತೆ ಮತ್ತು ಮುಂದಿನ ದಿನಗಳಲ್ಲಿ ಹೆಚ್ಚಿನ ಸೋಂಕು ಆದಾಗಲೂ ಪರಿಸ್ಥಿತಿ ಗಂಭೀರವಾಗದಂತೆ ನೋಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಬೇಕು. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು.

5. ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಮೊದಲೇ ಇತ್ತು. ಅದರ ಜೊತೆಗೆ ಈಗ ಕೆಲಸದ ಒತ್ತಡ ಹೆಚ್ಚಾಗಿದೆ. ಸ್ವತಃ ಕೋವಿಡ್ ಸೋಂಕಿನಿಂದ ಬಳಲಿ ವಿಶ್ರಾಂತಿಗೆ ತೆರಳುವವರೂ ಇರಬಹುದು. ಹಾಗಾಗಿ ಹೆಚ್ಚಿನ ಜನರನ್ನು ನೇಮಕಾತಿ ಮಾಡಿಕೊಳ್ಳಬೇಕು. ಇದು ವಿಶೇಷ ಪರಿಸ್ಥಿತಿಯಾಗಿದ್ದು, ಮೂವತ್ತು ಸಾವಿರದಷ್ಟು ಇರುವ ಗುತ್ತಿಗೆ ನೌಕರರನ್ನು ಈಗಲಾದರೂ ಗೌರವಯುತವಾಗಿ ನಡೆಸಿಕೊಳ್ಳಬೇಕು.

6. ರಾಜ್ಯದ ಪ್ರತಿಯೊಂದು ಪಾಲಿಕೆ, ನಗರಸಭೆ, ಪುರಸಭೆ, ಪಂಚಾಯಿತಿಸೇರಿದಂತೆ ಜನಪ್ರತಿನಿಧಿಗಳು ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ವಿವರಗಳನ್ನು ನೀಡಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು.

7. ಚಿಕಿತ್ಸೆಗೆ ಸಂಬಂಧಿಸಿದಂತೆ ಐಸಿಎಂಆರ್ (ICMR) ಅಥವಾ ವಿಶ್ವ ಆರೋಗ್ಯ ಸಂಸ್ಥೆಗಳು ಅನುಮೋದಿಸಿರದ ರೆಮೆಡಿಸಿವಿರ್‌ನಂತಹ ಸಂಗತಿಗಳಿಗೆ ಒತ್ತು ನೀಡದಂತೆ ಕ್ರಮ ಕೈಗೊಳ್ಳಬೇಕು.

8. ಯಾರಿಗೆ ಆಕ್ಸಿಜನ್ ಬೆಡ್ ಅಥವಾ ಐಸಿಯು ಬೆಡ್ ಅಗತ್ಯವಿದೆಯೋ ಅವರಿಗೇ ಆದ್ಯತೆಯ ಮೇರೆಗೆ ಸಿಗುವಂತೆ ಮತ್ತು ಈ ವಿಚಾರದಲ್ಲಿ ವಿಐಪಿ ಶಿಫಾರಸ್ಸುಗಳಿಗೆ ಮಣಿಯದಂತೆ ನಿಯಮಾವಳಿಗಳನ್ನು ರೂಪಿಸಿ ಅದರ ಉಸ್ತುವಾರಿಯನ್ನು ಕಟ್ಟುನಿಟ್ಟಾಗಿ ಮಾಡಬೇಕು.

ಬೆಂಗಳೂರು ಬಹಳ ಮುಖ್ಯವೇ. ಆದರೆ ಯಾವ ಕಾರಣಕ್ಕೂ ಉಳಿದ ಜಿಲ್ಲಾ ಕೇಂದ್ರಗಳನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಮಹಾರಾಷ್ಟ್ರದಲ್ಲಿ ಮುಂಬೈನ ಆಚೆ ಇತರ ನಗರ ಪಟ್ಟಣಗಳಲ್ಲೂ ದೊಡ್ಡ ಸಮಸ್ಯೆ ಉಂಟಾಗಿದ್ದನ್ನು ಕಾಣುತ್ತಿದ್ದೇವೆ. ಆಕ್ಸಿಜನ್ ಹಾಗೂ ಆಕ್ಸಿಜನ್ ಇರುವ ಹಾಸಿಗೆಗಳು ಎಲ್ಲಾ ಕಡೆ (ತಾಲೂಕು ಮಟ್ಟದವರೆಗೆ) ಇರುವಂತೆ ನೋಡಿಕೊಳ್ಳುವುದು ಇಂದಿನ ಅಗತ್ಯ.

ಅತ್ಯಂತ ಅಗತ್ಯವಿರುವ ಮತ್ತು ಸಾಧ್ಯವೂ ಇರುವ ಈ ಕೆಲಸವನ್ನು ಮಾಡದ ಸರ್ಕಾರವು ನಾಗರಿಕ ಸರ್ಕಾರ ಅಲ್ಲ ಎಂದಾಗಿಬಿಡುತ್ತದೆ. ನಮ್ಮ ರಾಜ್ಯದ ಸರ್ಕಾರವು ಅಂತಹ ಅಪಕೀರ್ತಿಯನ್ನು ತಂದುಕೊಳ್ಳಲಾರದು ಎಂಬ ವಿಶ್ವಾಸವಿದ್ದರೂ, ಇದನ್ನು ಆಗಮಾಡಲೇಬೇಕೆಂದು ಒತ್ತಡ ತರುವುದು ನಮ್ಮ ಕರ್ತವ್ಯವೆಂದು ಭಾವಿಸಿ ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನು ನಮ್ಮ ಕಡೆಯಿಂದ ಮಾಡುತ್ತೇವೆ. ಇದು ನಾಡಿನ ಎಲ್ಲಾ ಸಂಘಟನೆಗಳು, ವಿರೋಧ ಪಕ್ಷಗಳು, ಮಾಧ್ಯಮ ಸಂಸ್ಥೆಗಳ ಬೇಡಿಕೆ ಪಟ್ಟಿ ಎಂದು ಭಾವಿಸಿ ಕಾರ್ಯಪ್ರವೃತ್ತವಾಗಬೇಕೆಂದು ಕೋರುತ್ತೇವೆ ಎಂದು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT