ಮೈಸೂರು: ‘ರಾಮನಗರಕ್ಕೂ, ಸಚಿವ ಅಶ್ವತ್ಥನಾರಾಯಣ ಅವರಿಗೂ ಏನು ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
‘ಅಲ್ಲಿಗೆ ಸುಳ್ಳು ಹೇಳಲು ಹೋಗಿರಬೇಕು. ಅಲ್ಲಿನ ವಿಚಾರ ಮಾತನಾಡಲು ಅಶ್ವತ್ಥನಾರಾಯಣ ಯಾರು? ನಮ್ಮನ್ನು ಇದುವರೆಗೆ ಸೌಜನ್ಯಕ್ಕೂ ಮಾತನಾಡಿಸಿಲ್ಲ. ಅವರೇನು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಹೇಳಲಿ’ ಎಂದುಸವಾಲೆಸೆದರು.
‘ರಾಜಕೀಯ ಏನೇ ಇರಲಿ ಎಚ್.ಡಿ.ಕುಮಾರಸ್ವಾಮಿ ರಾಮನಗರವನ್ನು ಜಿಲ್ಲೆ ಮಾಡಿದರು. ಜಿಲ್ಲಾ ಕೇಂದ್ರದಲ್ಲಿ ಒಂದಷ್ಟು ಕಟ್ಟಡ ಕಟ್ಟಿಸಿದ್ದರು. ಆದರೆ, ಅಲ್ಲಿ ಪ್ರತಿಮೆಗಳನ್ನು ನಿರ್ಮಿಸಿದ್ದು ನಾವು’ ಎಂದರು.
‘ವೃಷಭಾವತಿ ನದಿಯನ್ನು ಸ್ವಚ್ಛಗೊಳಿಸಿದ್ದರೆ ಹೇಳಲಿ. ಯಾವುದಾದರೂ ಕಟ್ಟಡ ಕಟ್ಟಿಸಿದ್ದರೆ ತೋರಿಸಲಿ. ಕೋವಿಡ್ನಿಂದ ಮೃತಪಟ್ಟವರಿಗೆ ಪರಿಹಾರವನ್ನಾದರೂ ನೀಡಿದ್ದರೆ ತಿಳಿಸಲಿ’ ಎಂದು ಹೇಳಿದರು.