ಬೆಂಗಳೂರು: ರಾಜ್ಯದಾದ್ಯಂತ ಶನಿವಾರ 9,785 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 144 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಕೋವಿಡ್ ಹೊಸ ಪ್ರಕರಣಗಳ ಜತೆಗೆ ಮರಣ ಪ್ರಕರಣಗಳ ಸಂಖ್ಯೆ ಕೂಡ ಇಳಿಕೆ ಕಂಡಿದೆ. ಮರಣ ಪ್ರಮಾಣ ದರವು ಶೇ 1.47ಕ್ಕೆ ಇಳಿಕೆಯಾಗಿದೆ. ಕಳೆದ ಏ.28ಕ್ಕೆ ಮರಣ ಪ್ರಮಾಣ ದರ ಶೇ 0.56 ರಷ್ಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಈ ಪ್ರಮಾಣವು ಶೇ 1ರ ಗಡಿ ದಾಟಿತ್ತು. ಬಳಿಕ ಏರುಗತಿ ಪಡೆದಿದ್ದ ಈ ಪ್ರಮಾಣ, ಈಗ ಇಳಿಮುಖ ಮಾಡಿದೆ.
ಸೋಂಕು ದೃಢ ಪ್ರಮಾಣವು ಶೇ 6.61 ರಷ್ಟು ವರದಿಯಾಗಿದೆ. ಈ ತಿಂಗಳು 12 ದಿನಗಳಲ್ಲಿ 1.53 ಲಕ್ಷ ಮಂದಿ ಸೋಂಕಿತರಾಗಿದ್ದಾರೆ.
ಇದರೊಂದಿಗೆ ಸೋಂಕಿತರ ಸಂಖ್ಯೆ 27,57,324 ಕ್ಕೆ ಏರಿಕೆಯಾಗಿದೆ. ಆ ಪೈಕಿ 32,788 ಮಂದಿ ಸಾವಿಗೀಡಾಗಿದ್ದಾರೆ. ಇದುವರೆಗೆ 25,32,719 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 1,91,796 ಸಕ್ರಿಯ ಪ್ರಕರಣಗಳಿವೆ.
ಇಂದು ಬೆಂಗಳೂರಿನಲ್ಲಿ 2454 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಉಳಿದಂತೆ ಶಿವಮೊಗ್ಗ 715, ಹಾಸನ 624, ದಕ್ಷಿಣ ಕನ್ನಡ 618, ಮೈಸೂರು 482, ಬೆಳಗಾವಿ 443, ತುಮಕೂರು ಜಿಲ್ಲೆಯಲ್ಲಿ 440 ಹೊಸ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 6.61ರಷ್ಟಿದ್ದು, ಮರಣ ಪ್ರಮಾಣ ಶೇ.1.47 ರಷ್ಟಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.