ಬೆಂಗಳೂರು: ಕೆಪಿಟಿಸಿಎಲ್ ನೇಮಕಾತಿ ಹಗರಣ ಬಯಲಿಗೆ ಬಂದಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಇದು ಸರ್ಕಾರದ ವೈಫಲ್ಯವೋ ಅಥವಾ ಹಗರಣಗಳ ಸಾಧನೆಯೋ ತಿಳಿಯುತ್ತಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಬಿಜೆಪಿ ಅಧಿಕಾರವಧಿಯಲ್ಲಿ ಹಗರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಉದ್ಯೋಗಾಕಾಂಕ್ಷಿಗಳ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಕಠಿಣ ಕ್ರಮ ಎನ್ನುವುದು ಮಾತಿಗೆ ಸೀಮಿತವಾಗಿರದೆ ಬಿಜೆಪಿ ಸರ್ಕಾರ ಅದನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಡಿ.ಕೆ. ಶಿವಕುಮಾರ್, ಪಿಎಸ್ಐ ನೇಮಕಾತಿ ಹಗರಣ ಮಾಸುವ ಮುನ್ನವೇ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ನಡೆದ ಹಗರಣ ಬಯಲಿಗೆ ಬಂದಿದೆ. ತಂದೆ-ಮಗ ಪರೀಕ್ಷಾ ಕೇಂದ್ರಕ್ಕೆ ಬಂದು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಸರ್ಕಾರದ ವೈಫಲ್ಯವೋ ಅಥವಾ ಹಗರಣಗಳ ಸಾಧನೆಯೋ ತಿಳಿಯುತ್ತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹಗರಣಗಳ ಸಂಖ್ಯೆ ಆಕಾಶದತ್ತ ಮುಖ ಮಾಡುತ್ತಲೇ ಇದೆ. ಪ್ರತಿಯೊಂದು ವಿಚಾರಕ್ಕೂ 'ಕಠಿಣ ಕ್ರಮ' ಕೈಗೊಳ್ಳುವ ಸರ್ಕಾರ ಈ ವಿಚಾರಗಳಲ್ಲಿ ಮೌನವ್ರತ ಆಚರಿಸುತ್ತಿದೆಯೇ? ನಿರುದ್ಯೋಗ ಸಮಸ್ಯೆ ಎಲ್ಲರ ಊಹೆಗೂ ಮೀರಿ ಬೆಳೆಯುತ್ತಿದೆ. ಹೀಗಿದ್ದಾಗ ಇಂತಹ ಹಗರಣಗಳು ಪದೇ ಪದೇ ನಡೆಯುತ್ತಿದ್ದರೆ ಉದ್ಯೋಗಾಕಾಂಕ್ಷಿಗಳ ಗತಿಯೇನು? ಎಂದು ಕೇಳಿದರು.
ಇದನ್ನೂ ಓದಿ:ಕೆಪಿಟಿಸಿಎಲ್ ನೇಮಕಾತಿ | ಪರೀಕ್ಷಾ ಅಕ್ರಮ ಸಹಿಸಿಕೊಳ್ಳಲ್ಲ: ಸಚಿವ ಸುನೀಲ್ ಕುಮಾರ್
ಕಠಿಣ ಕ್ರಮ ಎನ್ನುವುದು ಬಿಜೆಪಿ ಸರ್ಕಾರದ ಮಾತಿಗೆ ಸೀಮಿತವಾಗಿರದೆ ಅದು ಅನುಷ್ಠಾನಕ್ಕೆ ಬರಬೇಕು. ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಡೆದ ಪ್ರಮಾದವನ್ನು ಸರಿ ಮಾಡುವುದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.