ಬೆಂಗಳೂರು: ‘ಈಗ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡುತ್ತಿದ್ದಾರೆ. ಮುಂದೆ ತಾಲ್ಲೂಕಿಗೊಂದು ಮಾಡಲಿ, ನಂತರ ಸೌತೆಕಾಯಿ, ಬದನೆಕಾಯಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ಕರಿಬೇವು ಸೊಪ್ಪಿಗೂ ವಿಶ್ವವಿದ್ಯಾಲಯಗಳನ್ನು ಮಾಡಲಿ’ ಎಂದು ಕಾಂಗ್ರೆಸ್ನ ಕೆ.ಆರ್.ರಮೇಶ್ ಕುಮಾರ್ ಅವರು ವ್ಯಂಗ್ಯವಾಡಿದರು.
ವಿಧಾನಸಭೆಯಲ್ಲಿ ಮಂಗಳವಾರ ಇಲಾಖೆಗಳ ಬೇಡಿಕೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದಅವರು, ಈ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಲು ಬಹಳ ಜನ ಕಾದು ಕುಳಿತಿದ್ದಾರೆ ಎಂದರು.
‘ಕೃಷಿ ವಿಶ್ವವಿದ್ಯಾಲಯಗಳಲ್ಲಿ ಏನು ಸಂಶೋಧನೆ ಮಾಡುತ್ತಿದ್ದಾರೆ. ರಾಜ್ಯದ ಸಾವಿರಾರು ಕೃಷಿ ಭೂಮಿಯಲ್ಲಿ ಬಳ್ಳಾರಿ ಜಾಲಿ ವ್ಯಾಪಿಸಿದೆ. ಕೆರೆಗಳಿಗೂ ಕಳೆಗಳುಆವರಿಸಿವೆ. ಹೊಲಗಳ ಬದಿಯಲ್ಲಿ ಬೇಲಿಗಾಗಿಬಳಸುವ ಕತ್ತಾಳೆಯ ಅಭಿವೃದ್ಧಿಪಡಿಸುವ ಬಗ್ಗೆ ಕೃಷಿ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರಾ? ಪಾರ್ಥೇನಿಯಂ ತಡೆಗೆ ಏನು ಮಾಡಿದ್ದಾರೆ’ ಎಂದು ಅವರು ಪ್ರಶ್ನಿಸಿದರು.
ಕೃಷಿ ವಿಶ್ವವಿದ್ಯಾಲಯಗಳು ಏನು ಮಾಡುತ್ತಿವೆ ಎಂಬುದು ಯಾರಿಗೂ ಗೊತ್ತಾಗುತ್ತಿಲ್ಲ ಎಂದು ರಮೇಶ್ಕುಮಾರ್ ಹೇಳಿದರು.
2010–11 ರಲ್ಲಿ ರಾಜ್ಯದಲ್ಲಿ 78.31 ಲಕ್ಷ ರೈತ ಕುಟುಂಬಗಳಿದ್ದವು. 2015–16 ರಲ್ಲಿ ಆ ಸಂಖ್ಯೆಯ 86 ಲಕ್ಷಕ್ಕೆ ಏರಿತ್ತು. ಆದರೆ ಉಳುಮೆ ಮಾಡುವ ಭೂಮಿ ಕಡಿಮೆ ಆಯಿತು. ಈಗ ಎಲ್ಲರೂ ರೈತರು ಎಂದೇ ಹೇಳಿಕೊಳ್ಳುತ್ತಾರೆ ಎಂದು ಅವರು ವ್ಯಂಗ್ಯವಾಡಿದರು.