ಬೆಂಗಳೂರು: ರಾಜ್ಯ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ) ನೇಮಕಾತಿಗಾಗಿ ನಡೆದ ದೈಹಿಕ ಪರೀಕ್ಷೆ ಸಂದರ್ಭದಲ್ಲಿ ಅಸಲಿ ಅಭ್ಯರ್ಥಿಗಳ ಪರವಾಗಿ ಹಾಜರಾಗಿದ್ದ ಮೂವರು ನಕಲಿ ಅಭ್ಯರ್ಥಿಗಳು ಹಿರಿಯ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
‘ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಸಲಿ ಅಭ್ಯರ್ಥಿಗಳ ಪರವಾಗಿ ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವೈದ್ಯಕೀಯ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ವೇಳೆ ಮೂವರ ಅಕ್ರಮ ಬಯಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ ಮೂವರು ನಕಲಿ ಅಭ್ಯರ್ಥಿಗಳು ಹಾಗೂ ಮೂವರು ಅಸಲಿ ಅಭ್ಯರ್ಥಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಅಭ್ಯರ್ಥಿ ಮಲ್ಲಯ್ಯ ಪೂಜಾರಿ ಎಂಬುವರ ಪರವಾಗಿ ಸೈಯದ್ ಚಿಮ್ಮಡ್, ಜಗದೀಶ್ ದೊಡ್ಡಗೌಡರ ಪರವಾಗಿ ಪ್ರಕಾಶ್ ಆಡಿನ್ ಹಾಗೂ ನಾಗಪ್ಪ ಪರವಾಗಿ ಮಲ್ಲಿಕಾರ್ಜುನ್ ಎಂಬುವರು ಪರೀಕ್ಷೆಗೆ ಹಾಜರಾಗಿದ್ದರು. ಇವರೆಲ್ಲರ ವಿರುದ್ಧ ಮಡಿವಾಳ ಹಾಗೂ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದೂ ಹೇಳಿದರು.
‘₹ 5 ಲಕ್ಷಕ್ಕೆ ಮಾತುಕತೆ ನಡೆಸಿದ್ದ ನಕಲಿ ಅಭ್ಯರ್ಥಿಗಳು, ಅಸಲಿ ಅಭ್ಯರ್ಥಿಗಳ ಪರ ಪರೀಕ್ಷೆಗೆ ಹಾಜರಾಗಲು ಒಪ್ಪಿದ್ದರು ಎಂಬ ಮಾಹಿತಿ ಇದೆ’ ಎಂದೂ ತಿಳಿಸಿದರು.