ವಿಜಯಪುರ:ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿರುವ ಮಹಾರಾಷ್ಟ್ರದ ಜತ್, ಅಕ್ಕಲಕೋಟೆ ಹಾಗೂ ದಕ್ಷಿಣ ಸೊಲ್ಲಾಪುರದ ಗಡಿ ಭಾಗದಲ್ಲಿ ಅನ್ಯ ಭಾಷಿಕರ ಸಮೀಕ್ಷೆ ನಡೆಸಲು ಮಹಾರಾಷ್ಟ್ರ ಸರ್ಕಾರ ಅಲ್ಲಿಯ ಗ್ರಾಮ ಪಂಚಾಯ್ತಿಗಳಿಗೆ ಆದೇಶ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
‘ಮಹಾರಾಷ್ಟ್ರದ ಈ ಕ್ರಮಅಪ್ರಸ್ತುತ ಮತ್ತು ಖಂಡನೀಯ ರಾಜ್ಯದ ಕನ್ನಡಿಗರೆಲ್ಲ ಇದನ್ನು ವಿರೋಧಿಸುತ್ತೇವೆ. ಅಲ್ಲಿನ ಕನ್ನಡಿಗರನ್ನು ಮಹಾರಾಷ್ಟ್ರ ಸರ್ಕಾರ ಇಂತಹ ಸಮೀಕ್ಷೆಯ ಮೂಲಕ ಹೆದರಿಸುವ ಪ್ರಯತ್ನ ಮಾಡಬಾರದು’ ಎಂದುಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.
ಸೌಹಾರ್ದತೆಯಿಂದ, ಸೌಜನ್ಯದಿಂದ ಇರುವ ಮಹಾರಾಷ್ಟ್ರದಲ್ಲಿನ ಕನ್ನಡಿಗರಿಗೆ ಆ ಸರ್ಕಾರವು ಗೌರವ ಹಾಗೂ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಭದ್ರತೆ ನೀಡಬೇಕಾಗಿರುವುದು ಸಂವಿಧಾನಾತ್ಮಕ ಕರ್ತವ್ಯವಾಗಿದೆ ಎಂದಿದ್ದಾರೆ.
ಅನಗತ್ಯವಾಗಿ ಆಗಾಗ್ಗೆ ಗಡಿ ಭಾಗದಲ್ಲಿನ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕಾರ್ಯವನ್ನು ಮಹಾರಾಷ್ಟ್ರ ಸರ್ಕಾರ ಮಾಡಬಾರದು ಎಂದು ಹೇಳಿದ್ದಾರೆ.
ಗಡಿ ನಾಡಿನ ಕನ್ನಡಿಗರ ಹಿತಕಾಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸದಾ ಸನ್ನದ್ಧವಾಗಿದೆ. ಗಡಿಭಾಗದ ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.