ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದರು.
ಭಾನುವಾರ ರಾಜಭವನದಲ್ಲಿ ನಡೆದ ನೂತನ ರಾಜ್ಯಪಾಲರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, 'ಅಕ್ರಮ ಗಣಿಗಾರಿಕೆ ಕುರಿತು ಈಗಾಗಲೇ ಎರಡು ಬಾರಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದೇನೆ. ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪಿಸುವೆ' ಎಂದರು.
'ನನ್ನದು ವೈಯಕ್ತಿಕವಾಗಿ ಯಾರದ್ದೇ ವಿರುದ್ಧದ ಹೋರಾಟ ಅಲ್ಲ. ದ್ವೇಷದ ರಾಜಕಾರಣವನ್ನೂ ಮಾಡುವುದಿಲ್ಲ. ನನ್ನ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗುತ್ತಿರುವ ತೊಂದರೆ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ಇದು ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧದ ಹೋರಾಟವೂ ಅಲ್ಲ' ಎಂದರು.
'ಕುಮಾರಸ್ವಾಮಿ ಅಥವಾ ಅವರ ಬೆಂಬಲಿಗರ ದಾರಿಯಲ್ಲಿ ನಾವು ಸಾಗುವುದು ಬೇಡ ಎಂದು ಅಂಬರೀಷ್ ಅವರ ಅಭಿಮಾನಿಗಳಲ್ಲಿ ಮನವಿ ಮಾಡುವೆ. ಶಾಂತಿಯುತ ಹೋರಾಟದ ಹಾದಿಯಲ್ಲಿ ಸಾಗೋಣ ಎಂಬುದು ನನ್ನ ಮನವಿ' ಎಂದರು.
ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಮುರುಗೇಶ ನಿರಾಣಿ ಅವರೊಂದಿಗೂ ಚರ್ಚಿಸಲಾಗಿದೆ. ಅಗತ್ಯ ಕಂಡುಬಂದರೆ ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಲಾಗುವುದು ಎಂದು ಸುಮಲತಾ ಹೇಳಿದರು.