ಹೀಗೆ ಅವಮಾನ ಮಾಡಬಾರದಿತ್ತು: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಮಂಜಮ್ಮ ಜೋಗತಿ ಬೇಸರ

ಬೆಂಗಳೂರು: ರಾಜ್ಯದಲ್ಲಿರುವುದು ಮಂಗಳಮುಖಿ ಸರ್ಕಾರ ಎಂಬ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ಜಾನಪದ ಆಕಾಡೆಮಿ ಅಧ್ಯಕ್ಷೆ ಬಿ. ಮಂಜಮ್ಮ ಜೋಗತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇಬ್ರಾಹಿಂ ಹೇಳಿಕೆಯ ವರದಿಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಅವರು, ‘ನನ್ನ ತಂದೆ ಕೂಡ ಹೀಗೆ ಹೇಳಿದ್ದರು- ಗಂಡಾಗಿದ್ದರೆ ಕೆಲಸ ಕೊಡಿಸುತ್ತಿದ್ದೆ, ಹೆಣ್ಣಾಗಿದ್ದರೆ ಮದುವೆ ಮಾಡಿಸುತ್ತಿದ್ದೆ, ಕುರುಡ ಕುಂಟ ಆಗಿದ್ದರೆ ಮನೆಯಲ್ಲೇ ಇರಿಸಿಕೊಂಡು ಊಟ ಹಾಕುತ್ತಿದ್ದೆ. ನಾನು ಮಂಗಳಮುಖಿ, ಕಲಾವಿದೆ, ಕನ್ನಡತಿ. ಸಮಾಜ ಗೌರವಿಸುತ್ತಿದೆ ನಮ್ಮನ್ನು. ಹೀಗೆ ಅವಮಾನ ಮಾಡಬಾರದಿತ್ತು ಸರ್. ನಿಮ್ಮ ರಾಜಕೀಯಕ್ಕೆ ನೀವು ಕೈ ತಟ್ಟಿದ್ದೀರಿ ಇವತ್ತು!’ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿರುವುದು ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರ: ಸಿ.ಎಂ. ಇಬ್ರಾಹಿಂ
ಏನು ಹೇಳಿದ್ದರು ಸಿ.ಎಂ. ಇಬ್ರಾಹಿಂ?
‘ರಾಜ್ಯದಲ್ಲಿ ಇರುವುದು ಬಿಜೆಪಿ ಸರ್ಕಾರ ಅಲ್ಲ, ಮಂಗಳಮುಖಿ ಸರ್ಕಾರ. ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಆದಷ್ಟು ಬೇಗ ಈ ಮಂಗಳಮುಖಿ ಸರ್ಕಾರದಿಂದ ಮುಕ್ತಿಪಡೆಯೋಣ. ಇವರ ಜತೆ ಜಗಳ ಆಡುವುದಕ್ಕೂ ಆಗಲ್ಲ, ಗಂಡಸರಾದರೆ ಗಂಡಸರನ್ನು ಕಳುಹಿಸಬಹುದು ಹೆಂಗಸರಾದರೆ ಹೆಂಗಸರನ್ನು ಕಳುಹಿಸಬಹುದು. ಇದು ಗಂಡಸೂ ಅಲ್ಲ ಹೆಂಗಸೂ ಅಲ್ಲ, ಕೈ ತಟ್ಟುತ್ತಾರೆ. ನಾವು ಹಿಂದೆ ಸರಿಯಬೇಕಾಗುತ್ತದೆ. ಎಷ್ಟು ಬೈದರೂ ಎಷ್ಟು ಉಗಿದರೂ ಹ್ಹಿ ಹ್ಹಿ ಹ್ಹೀ ಅಂತಾರೆ’ ಎಂದು ಸಿ.ಎಂ. ಇಬ್ರಾಹಿಂ ಅವರು ರಾಯಚೂರಿನ ಮುದಗಲ್ನಲ್ಲಿ ಇತ್ತೀಚೆಗೆ ಹೇಳಿದ್ದರು.
ಲಂಡನ್ನಲ್ಲಿ ಜೆರೆಮಿ ಕಾರ್ಬಿನ್ – ರಾಹುಲ್ ಭೇಟಿ: ಬಿಜೆಪಿ, ಕಾಂಗ್ರೆಸ್ ವಾಕ್ಸಮರ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.