ಚಿಕ್ಕಮಗಳೂರು: ‘ಕಂದಾಯ ಸಚಿವ ಆರ್.ಅಶೋಕ ಅವರ ಆಪ್ತ ಸಹಾಯಕ ಎಂದು ಗಂಗಾಧರ್ ಎಂಬಾತ ಪರಿಚಯಿಸಿಕೊಂಡು ಹಣ ಕೀಳಲು ಯತ್ನಿಸಿದರು’ ಎಂದು ಶೃಂಗೇರಿ ತಾಲ್ಲೂಕು ಉಪ ನೋಂದಣಾಧಿಕಾರಿ ಎಚ್.ಎಸ್. ಚೆಲುವರಾಜು ಆರೋಪಿಸಿದ್ದಾರೆ.
‘ಸಚಿವ ಅಶೋಕ ಅವರ ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಕಾರ್ಯಕ್ರಮ ಪಟ್ಟಿ ಇದೇ 20ರಂದು ವಾಟ್ಸ್ಆ್ಯಪ್ಗೆ ಅಪರಿಚಿತ ಫೋನ್ ನಂಬರ್ನಿಂದ ಬಂದಿತ್ತು. 24ರಂದು ಬೆಳಿಗ್ಗೆ 10.30ರ ಹೊತ್ತಿಗೆ ವ್ಯಕ್ತಿಯೊಬ್ಬರು ಫೋನ್ ಮಾಡಿದರು. ಕಂದಾಯ ಸಚಿವ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಮಾತ ನಾಡುತ್ತಿದ್ದೇನೆ. ಸಚಿವರು ಶೃಂಗೇರಿಗೆ ಸಂಜೆ ಬರುತ್ತಾರೆ. ಅಲ್ಲಿ ಬಂದು ನನ್ನನ್ನು ಭೇಟಿ ಮಾಡುವಂತೆ ಅವರು ಸೂಚಿಸಿದರು’ ಎಂದು ಚೆಲುವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಚಿವರು ಬಂದಿದ್ದ ಸ್ಥಳಕ್ಕೆ ಹೋಗಿ ಆ ವ್ಯಕ್ತಿಯನ್ನು ಭೇಟಿಯಾದೆ. ಅವರು ಕೊಠಡಿಗೆ ಕರೆದೊಯ್ದರು. ‘ಕೊಡಿ... ಏನು ತಂದಿದ್ದೀರಾ...? ಎಷ್ಟು ತಂದಿದ್ದೀರಾ…?’ ಎಂದು ಕೇಳಿದರು. ಅಂಥ ಅಭ್ಯಾಸ ಎಲ್ಲ ಇಟ್ಟುಕೊಂಡಿಲ್ಲ ಎಂದು ದಬಾಯಿಸಿ ಹೊರಬಂದೆ’ ಎಂದರು.
‘ಫೋನ್ ಸಂಭಾಷಣೆಯ ರೆಕಾರ್ಡಿಂಗ್ ಇದೆ. ಮಾರನೇ ದಿನ ಆ ವ್ಯಕ್ತಿ ವಾಟ್ಸ್ಆಪ್ ಕಾಲ್ ಮಾಡಿ, ಹಿಂದಿನ ದಿನ ಏನೂ ನಡೆದೇ ಇಲ್ಲ ಎಂಬಂತೆ ಮಾತನಾಡಿದರು. ಇದೆಲ್ಲದರ ಬಗ್ಗೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು.