ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್‌ ಒಳಗೆ ಎಲ್ಲರಿಗೂ ಲಸಿಕೆ: ಸಚಿವ ಸುಧಾಕರ್

Last Updated 19 ಮೇ 2021, 20:05 IST
ಅಕ್ಷರ ಗಾತ್ರ

ಬೆಂಗಳೂರು: ಇದೇ ವರ್ಷದ ಅಕ್ಟೋಬರ್ ಅಥವಾ ನವೆಂಬರ್‌ ಒಳಗೆ ರಾಜ್ಯದಲ್ಲಿ ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲು ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾರತ್‌ ಬಯೋಟೆಕ್ ಘಟಕ ನಮ್ಮ ರಾಜ್ಯದಲ್ಲೇ ಇದ್ದು, ಅಲ್ಲಿಂದಲೂ ಲಸಿಕೆ ಸಿಗುವ ಭರವಸೆ ಕಂಪನಿಯಿಂದ ಸಿಕ್ಕಿದೆ. ಸ್ಪುಟ್ನಿಕ್‌ ಲಸಿಕೆ ಕೂಡ ನಮ್ಮ ರಾಜ್ಯದಲ್ಲೇ ಉತ್ಪಾದನೆ ಆಗಲಿದೆ’ ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮನೆ ಆರೈಕೆ ವ್ಯವಸ್ಥೆ ಇಲ್ಲದಿದ್ದರೆ, ಕೋವಿಡ್ ಆರೈಕೆ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸ್ಥಳೀಯ ಮಟ್ಟದ ಟಾಸ್ಕ್‌ ಫೋರ್ಸ್‌ ಈ ಕಾರ್ಯನಿರ್ವಹಿಸಲಿದೆ. ಬೂತ್‌ ಮಟ್ಟದ ಟಾಸ್ಕ್‌ ಫೋರ್ಸ್‌ ಸಮಿತಿಯಲ್ಲಿ ಸ್ಥಳೀಯರು, ಸಂಘಟನೆ, ಮುಖಂಡರಿದ್ದು ಇವರೆಲ್ಲ ಸೇರಿ ಕೋವಿಡ್‌ ನಿರ್ವಹಣೆ ಮಾಡುತ್ತಾರೆ’ ಎಂದು ತಿಳಿಸಿದರು.

ಕೊರೊನಾ ಸೋಂಕಿಗೆ ಒಳಗಾಗುವವರ ಸಂಖ್ಯೆಗಿಂತ ಗುಣಮುಖರಾಗಿ ಮನೆಗೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ಆಶಾದಾಯಕ ಬೆಳವಣಿಗೆ. ರಾಜ್ಯದಲ್ಲಿ ಈವರೆಗೆ 16,74,487 ಮಂದಿ ಕೋವಿಡ್‌ನಿಂದ ಗುಣ ಹೊಂದಿದ್ದಾರೆ. ಸಾವಿನ ಸಂಖ್ಯೆ ಮತ್ತು ಸೋಂಕಿತ ಸಂಖ್ಯೆ ನೋಡಿ ಆತಂಕಪಡಬಾರದು ಎಂದೂ ಸುಧಾಕರ್‌ ಹೇಳಿದರು.

ಪರೀಕ್ಷೆಗಳ ಸಂಖ್ಯೆ 1.29 ಲಕ್ಷಕ್ಕೆ ಏರಿಕೆ

ರಾಜ್ಯದಲ್ಲಿ ಎರಡು ವಾರಗಳಿಂದ ಇಳಿಕೆ ಕಂಡಿದ್ದ ಕೋವಿಡ್ ಪರೀಕ್ಷೆಗಳ ಸಂಖ್ಯೆ ಬುಧವಾರ ಏರಿಕೆ ಕಂಡಿದೆ. ಒಂದು ದಿನದ ಅವಧಿಯಲ್ಲಿ 1.29 ಲಕ್ಷ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, 34,281 ಮಂದಿ ಕೋವಿಡ್ ಪೀಡಿತರಾಗಿರುವುದು ದೃಢಪಟ್ಟಿದೆ. ಮಂಗಳವಾರ ಪರೀಕ್ಷೆಗಳ ಸಂಖ್ಯೆ 93 ಸಾವಿರಕ್ಕೆ ಇಳಿಕೆಯಾಗಿತ್ತು.

ಕೆಲ ದಿನಗಳಿಂದ ಏರಿಕೆ ಕಂಡಿದ್ದ ಸೋಂಕು ದೃಢ ಪ್ರಮಾಣವು ಶೇ 26.46ಕ್ಕೆ ಇಳಿಕೆಯಾಗಿದೆ. ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚಳವಾಗಿದ್ದು, ಮತ್ತೆ 49,953 ಮಂದಿಗೆ ಕಾಯಿಲೆ ವಾಸಿಯಾಗಿದೆ. 48 ಗಂಟೆಗಳ ಅವಧಿಯಲ್ಲಿ 60,590 ಮಂದಿ ಸೋಂಕಿತರಾಗಿರುವುದು ರಾಜ್ಯದಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1.08 ಲಕ್ಷ ಮಂದಿಗೆ ಕಾಯಿಲೆ ವಾಸಿಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈವರೆಗೆ ಗುಣಮುಖ ಆದವರ ಸಂಖ್ಯೆ 17.24 ಲಕ್ಷ ದಾಟಿದೆ. ರಾಜ್ಯದಲ್ಲಿ 468 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT