ಬೆಳೆ ಸಮೀಕ್ಷೆಯಲ್ಲಿ ಹಿನ್ನಡೆ: ಸಚಿವ ಪಾಟೀಲ ಗರಂ

ಮೈಸೂರು: ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಮೇಲೆ ಕೃಷಿ ಸಚಿವ ಬಿ.ಸಿ.ಪಾಟೀಲ ಚಾಟಿ ಬೀಸಿದ್ದಾರೆ.
ಅಲ್ಲದೇ, ಕೃಷಿ ಇಲಾಖೆಯ ಚಾಮರಾಜನಗರ ಜಂಟಿ ನಿರ್ದೇಶಕ, ಉಪನಿರ್ದೇಶಕ, ಅರಸೀಕೆರೆ ಹಾಗೂ ಕಡೂರು ತಾಲ್ಲೂಕಿನ ಸಹಾಯ ನಿರ್ದೇಶಕರನ್ನು ಕರ್ತವ್ಯ ಲೋಪದ ಮೇಲೆ ಅಮಾನತುಗೊಳಿಸಲಾಗುವುದು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು ವಿಭಾಗೀಯ ಮಟ್ಟದ ಬೆಳೆ ಸಮೀಕ್ಷೆ ಹಾಗೂ ಕೃಷಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಬೆಳೆ ಸಮೀಕ್ಷೆಯು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಅಧಿಕಾರಿಗಳ ತಾತ್ಸಾರ ಮನೋಭಾವೇ ಇದಕ್ಕೆ ಕಾರಣ’ ಎಂದು ತರಾಟೆಗೆ ತೆಗೆದುಕೊಂಡರು.
‘ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ತುಸು ಹಿನ್ನಡೆ ಆಗಿದೆ. ಈ ಭಾಗಗಳಲ್ಲಿ ರೈತರ ಪರವಾಗಿ ಖಾಸಗಿ ನಿವಾಸಿಗಳ (ಪಿಆರ್) ಮೂಲಕ ಬೆಳೆ ವಿವರ ದಾಖಲಿಸಲು, ಫೋಟೊ ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ’ ಎಂದರು.
ವಾರದಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬೇಕು. ಆ ಬಳಿಕ ಅದರ ಪರಿಶೀಲನೆ ಆರಂಭಿಸಬೇಕು ಎಂದು ಸೂಚನೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.