ರಾಯಚೂರು: ರಾಜ್ಯ ಸಚಿವ ಸಂಪುಟದಲ್ಲಿ ದಲ್ಲಾಳಿ, ಭ್ರಷ್ಟಾಚಾರಿಗಳಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅವರು ವಾಗ್ದಾಳಿ ಮುಂದುವರಿಸಿದ್ದಾರೆ.
ಜಿಲ್ಲೆಯ ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುವ ಪೂರ್ವ ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಚಿವ ಸಂಪುಟ ವಿಸ್ತರಣೆ ಆಗುವಾಗ ಒತ್ತಡ ಇರುವುದು ಸಹಜ. ಆದರೆ ಭ್ರಷ್ಟರನ್ನು ಸಚಿವ ಮಾಡುವ ಒತ್ತಾಯ ಸಾಮಾನ್ಯವಾಗಿ ಮುಖ್ಯಮಂತ್ರಿಗೆ ಇರುವುದಿಲ್ಲ. ಸಿ.ಪಿ.ಯೋಗೇಶ್ವರ್ ಭ್ರಷ್ಟಾಚಾರ ಹೊದ್ದು ಮಲಗಿದ್ದಾನೆ. ಜನರಿಗೆ ಮೋಸ ಮಾಡಿದವನಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಹರಿಹಾಯ್ದರು.
ಸಮ್ಮಿಶ್ರ ಸರ್ಕಾರದಲ್ಲಿ ಕ್ಷೀಪ್ರಕ್ರಾಂತಿ ಮಾಡಿ 17 ಜನರು ಹೊರಬಂದಿದ್ದೇವೆ. ಒಳ್ಳೆಯದಾಗುತ್ತದೆ ಎಂದು ನಿರೀಕ್ಷೆ ಇತ್ತು. ಈಗಿನ ಬೆಳವಣಿಗೆ ನಿರಾಸೆ ಮೂಡಿಸಿದೆ ಎಂದರು.
ಬಿಜೆಪಿಯಲ್ಲಿ ಸನ್ ಸ್ಟ್ರೋಕ್ (ಮಕ್ಕಳ ಒತ್ತಡ) ಆಗಿದೆ. ಶೀಘ್ರದಲ್ಲಿ ಸಿ.ಡಿ.ವೊಂದು ಬಿಡುಗಡೆ ಆಗಲಿದೆ. ಅದನ್ನು ಯಾರೂ ಬಿಡುಗಡೆ ಮಾಡುತ್ತಾರೆ ಎಂಬುದು ಮುಂದೆ ತಿಳಿಯಲಿದೆ ಎಂದು ಗುಟ್ಟು ಬಿಟ್ಟು ಕೊಡಲಿಲ್ಲ.