ಮಂಗಳೂರು: ತೌತೆ ಚಂಡಮಾರುತದಿಂದಾಗಿ ರಾಜ್ಯದ 22 ತಾಲ್ಲೂಕುಗಳ 121 ಗ್ರಾಮಗಳಲ್ಲಿ ಹಾನಿಯಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 333 ಮನೆಗಳಿಗೆ ಹಾಗೂ 644 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. 6 ಜನರು ಮೃತಪಟ್ಟಿದ್ದಾರೆ. 290 ಜನರಿಗೆ ಕಾಳಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದರು.
ಮನೆ ಹಾನಿಗೆ ಒಳಗಾದವರಿಗೆ ತಕ್ಷಣದ ಪರಿಹಾರವಾಗಿ ₹ 10 ಸಾವಿರ ವಿತರಿಸಲಾಗುತ್ತಿದೆ. ಭಾಗಶಃ ಹಾನಿಯಾದರೆ ₹ 1 ಲಕ್ಷ, ಪೂರ್ಣ ಹಾನಿಯಾಗಿದ್ದರೆ ₹ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಹಾನಿಯ ಕುರಿತು ಅಂದಾಜು ಪಟ್ಟಿಯನ್ನು ಸಿದ್ಧಪಡಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲಾಡಳಿತದ ಬಳಿ ಒಟ್ಟು ₹ 106 ಕೋಟಿ ಲಭ್ಯವಿದ್ದು, ಮೂಲಸೌಕರ್ಯ ಅಭಿವೃದ್ಧಿ, ಪರಿಹಾರ ನೀಡಲು ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.