ಬೆಂಗಳೂರು: ಸಕ್ಸಸ್ ಫಿಲ್ಮ್ಸ್ ಇಂಡಿಯಾ ಹಾಗೂ ಡಿ.ಕೆ.ಫ್ಲಾಗ್ ಫೌಂಡೇಷನ್ ವತಿಯಿಂದ ಶನಿವಾರ ನಡೆದ 'ಇಂಡಿಯಾ ಕ್ವಿಝ್' ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ವಿ.ವಿ.ಪುರದ ಜೈನ್ ಕಾಲೇಜಿನ ವಿದ್ಯಾರ್ಥಿ ಮಿತ್ರ ಹೆಗಡೆ ವಿಜೇತರಾಗಿದ್ದಾರೆ.
ಜುಲೈ 4ರಿಂದ ಸ್ಪರ್ಧೆ ಆರಂಭಗೊಂಡಿತ್ತು. ಅಂತಿಮ 13 ಸ್ಪರ್ಧಿಗಳ ಪೈಕಿ ಮಿತ್ರ ಹೆಗಡೆ ವಿಜೇತರಾಗಿ ಹೊರಹೊಮ್ಮಿದ್ದಾರೆ. ಪ್ರಶಸ್ತಿ ₹50 ಸಾವಿರ ನಗದು, ಗಿಫ್ಟ್ ವೋಚರ್ ಹಾಗೂ ಫಲಕ ಒಳಗೊಂಡಿದೆ.
ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜಿನ ನೆಫ್ರಾಲಜಿ ವಿಭಾಗದ ಮುಖ್ಯಸ್ಥ ಡಾ.ಸುಶಾಂತ್ ಹಾಗೂ ಗುಜರಾತಿ ಚಿತ್ರ ನಟಿ ಹಿಮಾಂಗಿನಿ ಹಂಚಿಕೊಂಡಿದ್ದಾರೆ. ಈ ಪ್ರಶಸ್ತಿಯು ₹25 ಸಾವಿರ ನಗದು ಒಳಗೊಂಡಿದೆ.
₹15 ಸಾವಿರ ನಗದು ಹಾಗೂ ಫಲಕ ಒಳಗೊಂಡಿರುವ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಯನ್ನುತಿರುವನಂತಪುರದ ವೈದ್ಯೆ ದೀಪ್ತಿ ಸ್ಯಾಮ್ಯುಯೆಲ್, ಬಹುರಾಷ್ಟ್ರೀಯ ಕಂಪನಿಕೆಮ್ ಟ್ರೀಟ್ ಇಂಡಿಯಾ ಲಿಮಿಟೆಡ್ನ ಮುಖ್ಯಸ್ಥ ಮುಕುಲ್ ಗುಪ್ತಾ, ಕೆಪಿಎಂಜಿ ಹಿರಿಯ ಪಾಲುದಾರ ನವೀನ್ ಅಗರವಾಲ್ ಹಂಚಿಕೊಂಡಿದ್ದಾರೆ.
ಆನ್ಲೈನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಂಬೈನ ಹೀರಾನಂದಾನಿ ಕಂಪನಿ ಮುಖ್ಯಸ್ಥ ನಿರಂಜನ್ ಹೀರಾನಂದಾನಿ, ಡಾ.ಸಂದೇಶ್ ಮಾಯೇಕರ್, ನ್ಯಾ.ಸುಧೀರ್ ಅಗರ್ವಾಲ್, ಹಾಕಿ ಆಟಗಾರ ಮೆಲ್ವಿನ್ ಫರ್ನಾಂಡೀಸ್, ಲಂಡನ್ನ ರಾಯಲ್ ಆಸ್ಪತ್ರೆಯ ಡಾ.ಶೈಲೇಶ್, ಬಾಲಿವುಡ್ನ ಗೀತ ರಚನೆಕಾರ ರವೀಂದ್ರ ರಾವಲ್ ಭಾಗವಹಿಸಿದ್ದರು.