ಚಿತ್ರದುರ್ಗ: ‘ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸುವಂತೆ ವಿದ್ಯಾರ್ಥಿನಿಯರಿಗೆ ಪ್ರಚೋದಿಸಲಾಗಿದ್ದು, ಈ ಕುರಿತು ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಠದ ಪ್ರೌಢಶಾಲೆಯ ಮಾಜಿ ಉದ್ಯೋಗಿ ಬಸವರಾಜೇಂದ್ರ, ಮುರುಘಾ ಮಠದ ಗಾಯತ್ರಿ, ಮೈಸೂರಿನ ಒಡನಾಡಿ ಸಂಸ್ಥೆಯ ವಿರುದ್ಧ ದೂರು ನೀಡಲಾಗಿದ್ದು, ಇಬ್ಬರು ನಡೆಸಿದ ಸಂಭಾಷಣೆಯ ಆಡಿಯೊವೊಂದನ್ನು ದೂರಿನೊಂದಿಗೆ ಸಲ್ಲಿಸಲಾಗಿದೆ.
‘ಗಾಯತ್ರಿ ಎಂಬುವವರು ಹಣದ ಆಸೆಗೆ ಒಡನಾಡಿ ಸೇವಾ ಸಂಸ್ಥೆ ಜತೆ ಶಾಮೀಲಾಗಿ, ಮಕ್ಕಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಶರಣರ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸ್ಥಳ ಮಹಜರು:ಎರಡನೇ ಆರೋಪಿ ಹಾಸ್ಟಲ್ನ ಮಹಿಳಾ ವಾರ್ಡನ್ರನ್ನು ಬುಧವಾರ ಮುರುಘಾ ಮಠಕ್ಕೆ ಕರೆ ತಂದ ಪೊಲೀಸರು, ಎರಡನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿದರು.