ಬೆಂಗಳೂರು: ಎಂಇಎಸ್ ಕೃತ್ಯವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಕಾರ್ಯಕರ್ತರು ಶಿವಸೇನೆ ಧ್ವಜಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಸೇರಿದ್ದ ನೂರಾರು ಕಾರ್ಯಕರ್ತರು ಎಂಇಎಸ್ಗೆ ಸೇರಿದ ಕೆಲ ಕಿಡಿಗೇಡಿಗಳ ದುಷ್ಕೃತ್ಯವನ್ನು ಖಂಡಿಸಿದರು. ಎಂಇಎಸ್. ನಿಷೇಧಿಸುವಂತೆಯೂ ಆಗ್ರಹಿಸಿದರು.
‘ಎಂಇಎಸ್.ಗೂಂಡಾಗಳಿಗೆ ಧಿಕ್ಕಾರ’, ‘ಮಹಾರಾಷ್ಟ್ರ ಏಕೀಕರಣ ಸಂಘಟನೆಗೆ ಧಿಕ್ಕಾರ’, ‘ಬೆಳಗಾವಿ ಎಂದೆಂದಿಗೂ ಕನ್ನಡಿಗರ ಆಸ್ತಿ’, ‘ದೇಶದ್ರೋಹಿ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಗಳನ್ನು ಬಹಿಷ್ಕರಿಸಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಕಾರರು, ಶಿವಸೇನೆ ಧ್ವಜವನ್ನು ನೆಲಕ್ಕೆ ಹಾಕಿ ಕಾಲಿನಿಂದ ತುಳಿದರು.
ಪ್ರತಿಭಟನಕಾರರು ಶಿವಸೇನೆ ಬಾವುಟಕ್ಕೆ ಬೆಂಕಿ ಹಚ್ಚಲು ಮುಂದಾದಾಗ ಪೊಲೀಸರು ತಡೆಯಲು ಮುಂದಾದರು. ಈ ವೇಳೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರ ವಿರೋಧದ ನಡುವೆಯೂ ಕಾರ್ಯಕರ್ತರು ಶಿವಸೇನೆ ಬಾವುಟ ಸುಟ್ಟರು.