ಫೆಬ್ರುವರಿಯಿಂದ ಈವರೆಗೆ ಕಲಬುರಗಿ ಜಿಲ್ಲೆಯ ವಿವಿಧೆಡೆ ಕೆಲಸದ ಸ್ಥಳದಲ್ಲಿ ಮೂವರು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ. ಕೆಲಸ ನಡೆಯುವ ಸ್ಥಳದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯಿತಿಯು ಟೆಂಟ್ ಹಾಕಿಸಿ ಸೂಕ್ತ ನೆರಳಿನ ವ್ಯವಸ್ಥೆಯ ಜೊತೆಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಕೂಲಿ ಕೆಲಸಕ್ಕೆ ಬಂದ ಮಹಿಳೆಯರೊಂದಿಗೆ ಇರುವ ಮಕ್ಕಳಿಗೆ ಹಾಲು, ಬಿಸ್ಕಟ್ ವ್ಯವಸ್ಥೆ ಮಾಡಬೇಕು. ಜೊತೆಗೆ ವೈದ್ಯಕೀಯ ಕಿಟ್ ಇಡಬೇಕು ಎಂಬುದು ನಿಯಮ. ಆದರೆ, ‘ಪ್ರಜಾವಾಣಿ’ ನರೇಗಾ ಕೆಲಸ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದಾಗ ನೀರು, ನೆರಳಿನ ವ್ಯವಸ್ಥೆಯನ್ನೂ ಮಾಡದೇ ಇರುವುದು ಕಂಡುಬಂತು.