ಕಲಬುರ್ಗಿ: ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದ ಕಲ್ಲಮ್ಮ ಎಂಬ ಈ ಅಜ್ಜಿ ಶುಕ್ರವಾರ ತಮ್ಮ ಮುರುಕಲು ಮನೆಯ ಚಾವಣಿ ಮೇಲೆ ಕುಳಿತು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ಅತಿವೃಷ್ಟಿ ಹಾಗೂ ಭೀಮಾ ಪ್ರವಾಹದಿಂದಾಗಿ ತಮ್ಮ ಮನೆ ಹಾಳಾಗಿದ್ದು, ಹೊಸ ಮನೆ ಕಟ್ಟಿಸಿಕೊಡಬೇಕು ಎಂಬುದು ಅವರ ಬೇಡಿಕೆ.
ಕಂದಾಯ ಸಚಿವ ಆರ್.ಅಶೋಕ ಅವರು ಶುಕ್ರವಾರ ಪ್ರವಾಹ ನಷ್ಟದ ಸಮೀಕ್ಷೆಗೆ ಫಿರೋಜಾಬಾದ್ ಗ್ರಾಮಕ್ಕೆ ಬಂದಾಗಲೂ ಈ ಅಜ್ಜಿ ಮನೆ ಮೇಲೆಯೇ ಕುಳಿತಿದ್ದರು. ಆದರೆ, ಅವರನ್ನು ಗಮನಿಸದ ಸಚಿವರು ವಾಹನದಲ್ಲಿ ಮುಂದೆ ಸಾಗಿದರು.
’ಪ್ರತಿ ವರ್ಷವೂ ಪ್ರವಾಹದಿಂದ ನಾವು ಬೇಸತ್ತುಹೋಗಿದ್ದೇವೆ. ಈ ಬಾರಿ ನನ್ನ ಮನೆ ಸಂಪೂರ್ಣ ಕುಸಿದಿದೆ. ವಾಸಕ್ಕೆ ಸುರಕ್ಷಿತ ಜಾಗವಿಲ್ಲ. ಹೊಸ ಮನೆ ಕಟ್ಟಿಸಿ ಕೊಡುವವರೆಗೂ ಚಾವಣಿ ಬಿಟ್ಟು ಇಳಿಯುವುದಿಲ್ಲ‘ ಎಂದು ಅಜ್ಜಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
ಕಳೆದ ಮೂರು ದಿನಗಳಿಂದಲೂ ಅಜ್ಜಿ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಸಚಿವರು ಸೌಜನ್ಯಕ್ಕೂ ಅವರನ್ನು ಮಾತನಾಡಿಸದೇ ಹೋದದ್ದು ಖಂಡನಾರ್ಹ ಎಂದು ಗ್ರಾಮಸ್ಥರು ದೂರಿದರು.