ಹೊನ್ನಾಳಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ತಡರಾತ್ರಿ 12 ಗಂಟೆ ಹೊತ್ತಿಗೆ ಆಮ್ಲಜನಕದ ಕೊರತೆ ಕಾಣಿಸಿಕೊಂಡಿತು. ಮಾಹಿತಿ ಪಡೆದ ಶಾಸಕ ರೇಣುಕಾಚಾರ್ಯ ತಾವೇ ಹರಿಹರಕ್ಕೆ ತೆರಳಿ ಗುರುವಾರ ಬೆಳಗಿನ ಜಾವದ ವೇಳೆಗೆ ಆಮ್ಲಜನಕದ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ಬಂದರು. 20 ರೋಗಿಗಳ ಜೀವ ಉಳಿಸಲು ನೆರವಾದರು.
ಆಸ್ಪತ್ರೆಯಲ್ಲಿ 20 ಜನ ಸೋಂಕಿತರು ಆಮ್ಲಜನಕ ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 2 ಗಂಟೆಗೆ ಆಗುವಷ್ಟು ಆಮ್ಲಜನಕ ಇತ್ತು. ಸಿಲಿಂಡರ್ ಖಾಲಿಯಾದರೆ ಸೋಂಕಿತರ ಜೀವಕ್ಕೆ ಅಪಾಯದ ಸಾಧ್ಯತೆ ಇತ್ತು ಎಂದು ಆಸ್ಪತ್ರೆ ಆಡಳಿತಾಧಿಕಾರಿ ಡಾ.ಚಂದ್ರಪ್ಪ ತಿಳಿಸಿದರು.
ಸ್ಪಂದಿಸಿದ ಶಾಸಕರು ತಹಶೀಲ್ದಾರ್, ಸಿಪಿಐ ಜೊತೆಗೆ ಖುದ್ದು ಹರಿಹರಕ್ಕೆ ತೆರಳಿ ‘ದಿ ಸದರನ್ ಗ್ಯಾಸ್ ಲಿ.’ ಕಂಪನಿಯಿಂದ 22 ಜಂಬೋ ಮತ್ತು 2 ಸಣ್ಣ ಸಿಲಿಂಡರ್ ವ್ಯವಸ್ಥೆ ಮಾಡಿಕೊಂಡು ಬಂದರು.
ತೆರೆಯದ ಲಸಿಕಾ ಕೇಂದ್ರ–ಬೀಗ ಒಡೆದ ಶಾಸಕ: ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಲಸಿಕೆ ಹಾಕಿಸಿಕೊಳ್ಳಲು ಜನಸಂದಣಿ ಇತ್ತು. ಬೆಳಿಗ್ಗೆ 10 ಗಂಟೆ ಆದರೂ ಕೇಂದ್ರ ತೆರೆಯದಿದ್ದುದಕ್ಕೆ ಆಡಳಿತಾಧಿಕಾರಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಬೀಗದ ಕೈ ಕಳೆದಿದೆ ಎಂದು ಗೊತ್ತಾಗುತ್ತಿದ್ದಂತೆ ಬೀಗ ಒಡೆದು ಲಸಿಕೆ ಹಾಕಲು ನೆರವಾದರು.