ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಿನ ಪೆಟ್ಟಿಗೆಯೊಳಗಿನ ಪೇಢಾ: ನಗೆ ಚಟಾಕಿ ಹಾರಿಸಿದ ಪ್ರಧಾನಿ ಮೋದಿ

Last Updated 12 ಮಾರ್ಚ್ 2023, 23:37 IST
ಅಕ್ಷರ ಗಾತ್ರ

ಧಾರವಾಡ: ‘ಧಾರವಾಡದ ಪೇಢಾ ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ. ಸಿಹಿ ತಿನ್ನುವ ಆಸೆಗೆ ಮಿತಿ ಹೇರಲು, ನನ್ನ ಆರೋಗ್ಯದ ಕಾಳಜಿ ಮಾಡಲೆಂದೇ ಮಿತ್ರ ಪ್ರಲ್ಹಾದ ಜೋಶಿ, ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೇಡೆ ಸ್ವೀಕರಿಸಿ, ನಗೆ ಚಟಾಕಿ ಹಾರಿಸಿದರು.

ಧಾರವಾಡದ ಕರಕುಶಲ ವಸ್ತುಗಳ ಉಡುಗೊರೆಯನ್ನೇ ಪ್ರಧಾನಿಗಳಿಗೆ ನೀಡಲಾಯಿತು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಖಿ ಸಾಫಲ್ಯದ ಕಸೂತಿ ಶಾಲನ್ನು ಹೊದಿಸಿ, ಧಾರವಾಡದ ಪೇಡೆಯನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ನೀಡಿ ಅಭಿನಂದಿಸಿದರು.

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಚಂದ್ರಾಪಟ್ಟಣದ ಹಾಜಿ ಉಸ್ಮಾನ್‌ಸಾಬ್ ಪಟವೇಗಾರ ಸಿದ್ಧಪಡಿಸಿದ ಏಲಕ್ಕಿ ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿದರು.

ಸಚಿವ ಗೋವಿಂದ ಕಾರಾಜೋಳ ಅವರು ಐಐಟಿಯ ಶಾಲನ್ನು ಹೊದಿಸಿದರು. ಸಚಿವರಾದ ಸೋಮಣ್ಣ ಹಾಗೂ ಸಿ.ಸಿ.ಪಾಟೀಲ ಅವರು ಹುಬ್ಬಳ್ಳಿ ವಿಜಯನಗರದ ವಿನಾಯಕ ದೇವದಾಸ ಅವರು ಸಿದ್ಧಪಡಿಸಿದ ಬೆಳ್ಳಿಯ ಸಿದ್ಧಾರೂಢ ಮೂರ್ತಿಯನ್ನು ನೀಡಿದರು.

ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕಲಾವಿದರಾದ ಮಾರುತಿ ಬಡಿಗೇರ ಹಾಗೂ ಶ್ರೀಧರ ಸಾವುಕಾರ ಸಿದ್ಧಪಡಿಸಿದ ನೈಸರ್ಗಿಕ ಬಣ್ಣದ ಕಲಘಟಗಿ ತೊಟ್ಟಿಲಿನ ಪ್ರತಿಕೃತಿಯನ್ನು ನೀಡಿದರು.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು
ಧಾರವಾಡ
: ಕಳೆದ ಫೆ. 27ರಂದು ಉದ್ಘಾಟನೆಯಾದ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಕುವೆಂಪು ವಿಮಾನ ನಿಲ್ದಾಣ’ ಎಂದು ಕರೆದರು.

ಉದ್ಘಾಟನೆಯ ದಿನ ನಿಲ್ದಾಣಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸಿರಲಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ‘ಕುವೆಂಪು’ ಅವರ ಹೆಸರಿಡುವಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಕೇಂದ್ರವನ್ನು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT