ಧಾರವಾಡ: ‘ಧಾರವಾಡದ ಪೇಢಾ ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ. ಸಿಹಿ ತಿನ್ನುವ ಆಸೆಗೆ ಮಿತಿ ಹೇರಲು, ನನ್ನ ಆರೋಗ್ಯದ ಕಾಳಜಿ ಮಾಡಲೆಂದೇ ಮಿತ್ರ ಪ್ರಲ್ಹಾದ ಜೋಶಿ, ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೇಡೆ ಸ್ವೀಕರಿಸಿ, ನಗೆ ಚಟಾಕಿ ಹಾರಿಸಿದರು.
ಧಾರವಾಡದ ಕರಕುಶಲ ವಸ್ತುಗಳ ಉಡುಗೊರೆಯನ್ನೇ ಪ್ರಧಾನಿಗಳಿಗೆ ನೀಡಲಾಯಿತು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಖಿ ಸಾಫಲ್ಯದ ಕಸೂತಿ ಶಾಲನ್ನು ಹೊದಿಸಿ, ಧಾರವಾಡದ ಪೇಡೆಯನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ನೀಡಿ ಅಭಿನಂದಿಸಿದರು.
ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಚಂದ್ರಾಪಟ್ಟಣದ ಹಾಜಿ ಉಸ್ಮಾನ್ಸಾಬ್ ಪಟವೇಗಾರ ಸಿದ್ಧಪಡಿಸಿದ ಏಲಕ್ಕಿ ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿದರು.
ಸಚಿವ ಗೋವಿಂದ ಕಾರಾಜೋಳ ಅವರು ಐಐಟಿಯ ಶಾಲನ್ನು ಹೊದಿಸಿದರು. ಸಚಿವರಾದ ಸೋಮಣ್ಣ ಹಾಗೂ ಸಿ.ಸಿ.ಪಾಟೀಲ ಅವರು ಹುಬ್ಬಳ್ಳಿ ವಿಜಯನಗರದ ವಿನಾಯಕ ದೇವದಾಸ ಅವರು ಸಿದ್ಧಪಡಿಸಿದ ಬೆಳ್ಳಿಯ ಸಿದ್ಧಾರೂಢ ಮೂರ್ತಿಯನ್ನು ನೀಡಿದರು.
ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕಲಾವಿದರಾದ ಮಾರುತಿ ಬಡಿಗೇರ ಹಾಗೂ ಶ್ರೀಧರ ಸಾವುಕಾರ ಸಿದ್ಧಪಡಿಸಿದ ನೈಸರ್ಗಿಕ ಬಣ್ಣದ ಕಲಘಟಗಿ ತೊಟ್ಟಿಲಿನ ಪ್ರತಿಕೃತಿಯನ್ನು ನೀಡಿದರು.
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು
ಧಾರವಾಡ: ಕಳೆದ ಫೆ. 27ರಂದು ಉದ್ಘಾಟನೆಯಾದ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಕುವೆಂಪು ವಿಮಾನ ನಿಲ್ದಾಣ’ ಎಂದು ಕರೆದರು.
ಉದ್ಘಾಟನೆಯ ದಿನ ನಿಲ್ದಾಣಕ್ಕೆ ಯಾವುದೇ ಹೆಸರನ್ನು ಅಂತಿಮಗೊಳಿಸಿರಲಿಲ್ಲ. ಆದರೆ ವಿಮಾನ ನಿಲ್ದಾಣಕ್ಕೆ ‘ಕುವೆಂಪು’ ಅವರ ಹೆಸರಿಡುವಂತೆ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಕೇಂದ್ರವನ್ನು ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.