ಬೆಂಗಳೂರು:‘ಹೌದ್ರಿ, ನಾನೂ ಆರ್ಎಸ್ಎಸ್ನಿಂದ ಬಂದಿದ್ದೇನೆ. ಪ್ರಧಾನಿ ಮೋದಿಯವರೂ ಆರ್ಎಸ್ಎಸ್ನವರೇ. ಆ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ಗೆ ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ದಿನದ ಕಲಾಪದ ಕೊನೆಯಲ್ಲಿ ಕಾಂಗ್ರೆಸ್ ಸದಸ್ಯರು ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದಾಗ ಯಡಿಯೂರಪ್ಪ ಸಿಟ್ಟಿಗೆದ್ದು, ‘ಹೌದು ನಾವೆಲ್ಲ ಆರ್ಎಸ್ಎಸ್ನವರು ಏನೀಗಾ? ಏನ್ ಮಾಡ್ತೀರಿ’ ಎಂದು ಪ್ರಶ್ನಿಸಿದರು.
‘ಆರ್ಎಸ್ಎಸ್ ಅನ್ನು ಟೀಕಿಸಿ ಟೀಕಿಸಿ ಈ ಸ್ಥಿತಿಗೆ ಬಂದಿದ್ದೀರಿ. ಇಲ್ಲಿ ಅರವತ್ತು ಎಪ್ಪತ್ತು ಜನ ಇದ್ದೀರಿ ಎಂದು ಕೂಗಾಡ್ತೀರಾ. ಹೀಗೆ ಮುಂದುವರಿಸಿದರೆ ಕಾಂಗ್ರೆಸ್ ನಾಮಾವಶೇಷ ಆಗುತ್ತದೆ’ ಎಂದು ಹೇಳಿದರು.
ಆರ್ಎಸ್ಎಸ್ ದೇಶದ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಂಘಟನೆ ಎಂದೂ ಯಡಿಯೂರಪ್ಪ ಹೇಳಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗೆಡೆ ಕಾಗೇರಿ ಮಾತನಾಡಿ, ‘ಈ ಚರ್ಚೆಗೂ ಆರ್ಎಸ್ಎಸ್ಗೂ ಸಂಬಂಧ ಇಲ್ಲ. ಆ ಸಂಘಟನೆಯ ಬಗ್ಗೆ ಇಲ್ಲಿ ಚರ್ಚಿಸುವುದು ಅಪ್ರಸ್ತುತ’ ಎಂದು ತಿಳಿಸಿದರು.