ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಬರೋಬ್ಬರಿ 40 ವರ್ಷಗಳಿಂದ (ಒಂಬತ್ತು ಚುನಾವಣೆಗಳಲ್ಲಿ) ಕೆ.ಆರ್. ರಮೇಶ್ ಕುಮಾರ್ ಹಾಗೂ ಜಿ.ಕೆ. ವೆಂಕಟಶಿವಾರೆಡ್ಡಿ ನಡುವೆಯೇ ಪೈಪೋಟಿ ಇದೆ.
ಈ ಅವಧಿಯಲ್ಲಿ ಅವರು ಸ್ಪರ್ಧಿಸಿರುವ ಪಕ್ಷಗಳು ಬದಲಾದರೂ ‘ಸ್ವಾಮಿ’, ‘ರೆಡ್ಡಿ’ ಎಂದೇ ಪ್ರಸಿದ್ಧರಾಗಿರುವ ಇವರಿಬ್ಬರ ನಡುವಿನ ಜಿದ್ದಾಜಿದ್ದಿಗೆ ತಡೆ ಬಿದ್ದಿಲ್ಲ. ಹಿಂಬಾಲಕರು, ಕಾರ್ಯಕರ್ತರ ಮನಸ್ಸು ಬದಲಾಗಿಲ್ಲ. ಒಮ್ಮೆ ವೆಂಕಟಶಿವಾರೆಡ್ಡಿ ಹಿಡಿತ ಸಾಧಿಸಿದರೆ, ಮತ್ತೊಮ್ಮೆ ರಮೇಶ್ ಕುಮಾರ್ ಗೆಲ್ಲುತ್ತಾ ಬಂದಿದ್ದಾರೆ.
ವೆಂಕಟಶಿವಾರೆಡ್ಡಿ ಕಾಂಗ್ರೆಸ್, ಬಿಜೆಪಿ ಸುತ್ತಿ ಜೆಡಿಎಸ್ಗೆ ಬಂದರೆ, ರಮೇಶ್ ಪಕ್ಷೇತರ, ಕಾಂಗ್ರೆಸ್, ಜನತಾ ಪರಿವಾರ ಸುತ್ತಿ ಮತ್ತೆ ಕಾಂಗ್ರೆಸ್ಗೆ ಬಂದಿದ್ದಾರೆ.
1978ರಲ್ಲಿ ವಿಧಾನಸಭೆ ಚುನಾವಣೆಗೆ ಪದಾರ್ಪಣೆ ಮಾಡಿದ್ದ ರಮೇಶ್ ಕುಮಾರ್ ಕಾಂಗ್ರೆಸ್ನಿಂದ ಗೆದ್ದಿದ್ದರು. 1983ರ ವಿಧಾನಸಭೆ ಚುನಾ
ವಣೆಯಿಂದ ಇವರಿಬ್ಬರ ಪೈಪೋಟಿ ಆರಂಭವಾಯಿತು. ಆ ಚುನಾವಣೆಯಲ್ಲಿ ವೆಂಕಟಶಿವಾರೆಡ್ಡಿ ಕಾಂಗ್ರೆಸ್ನಿಂದ ಗೆದ್ದಿ
ದ್ದರು. ಟಿಕೆಟ್ ಕೈತಪ್ಪಿದ್ದರಿಂದ ಸ್ವತಂತ್ರ ಅಭ್ಯರ್ಥಿಯಾಗಿದ್ದ ರಮೇಶ್ ಕುಮಾರ್ ಕೇವಲ 642 ಮತಗಳಿಂದ ಸೋತಿದ್ದರು.
1999ರಲ್ಲೂ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವೆಂಕಟಶಿವಾರೆಡ್ಡಿ ಎದುರು ಕೇವಲ 1,193 ಮತಗಳಿಂದ ಪರಾಭವಗೊಂಡಿದ್ದರು. ರಮೇಶ್ ಕುಮಾರ್ ಎರಡು ಬಾರಿ ಸ್ಪೀಕರ್ ಹಾಗೂ
ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಮೇಶ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ವೆಂಕಟಶಿವಾರೆಡ್ಡಿ ಒಕ್ಕಲಿಗ ಸಮುದಾಯವರು. ಕ್ಷೇತ್ರದಲ್ಲಿ ಪರಿಶಿಷ್ಟರು, ಒಕ್ಕಲಿಗರು ಹಾಗೂ ಮುಸ್ಲಿಂ ಮತದಾರರೇ ಹೆಚ್ಚು. ಆಂಧ್ರದ ಜೊತೆ ಗಡಿ ಹಂಚಿಕೊಂಡಿರುವ ತಾಲ್ಲೂಕಿನಲ್ಲಿ ತೆಲುಗು ಪ್ರಭಾವ ಹೆಚ್ಚಿದೆ.
2013, 2018ರಲ್ಲಿ ಮಾತ್ರ ರಮೇಶ್ ಅವರನ್ನೇ ಮತದಾರರು ಸತತವಾಗಿ ಎರಡು ಬಾರಿ ಗೆಲ್ಲಿಸಿದ್ದರು. ತಮ್ಮಕೊನೆಯ ಚುನಾವಣೆ ಎಂದು ಪ್ರಚಾರ ನಡೆಸುತ್ತಿದ್ದು, ರಮೇಶ್ ಕುಮಾರ್ ಅವರಿಗೆ ಹ್ಯಾಟ್ರಿಕ್ ಗೆಲುವು ಒಲಿಯಲಿದೆಯೋ? ವೆಂಕಟಶಿವಾರೆಡ್ಡಿ ಅವರತ್ತ
ಮತದಾರರು ಕರುಣೆ ತೋರಲಿದ್ದಾರೆಯೋ ಎಂಬ ಕುತೂಹಲವಿದೆ. ಬಿಜೆಪಿ ಅಭ್ಯರ್ಥಿಗಳು ಕಳೆದ 3 ಚುನಾವಣೆಗಳಲ್ಲಿ 5 ಸಾವಿರಕ್ಕಿಂತ ಹೆಚ್ಚು ಮತ ಪಡೆದಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.