ವಿಜಯಪುರ: ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ಮರು ಸಮೀಕ್ಷೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹುನಮಂತಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ರಾಷ್ಟ್ರೀಯ ಕಾನೂನು ಕಾಲೇಜು ಸಮೀಕ್ಷೆ ನಡೆಸಲಿದೆ ಎಂದರು.
ಮೊದಲ ಹಂತದಲ್ಲಿ ಮೈಸೂರು, ಬಳ್ಳಾರಿ ಜಿಲ್ಲೆಗಳಲ್ಲಿ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ನಡೆಯಲಿದ್ದು, ಈ ಜಿಲ್ಲೆಗಳ ವರದಿ ಆಧರಿಸಿ ಬಳಿಕ ಉಳಿದ ಜಿಲ್ಲೆಗಳ ಸಮೀಕ್ಷೆ ಮಾಡಲಾಗುವುದು ಎಂದು ತಿಳಿಸಿದರು.
ಸಮೀಕ್ಷೆ ಬಳಿಕ ಸಫಾಯಿ ಕರ್ಮಚಾರಿಗಳಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಹೇಳಿದರು.
2003ರಲ್ಲಿ ನಡೆದಿದ್ದ ಸಫಾಯಿ ಕರ್ಮಚಾರಿಗಳ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 1,42,290 ಜನ ಇರುವುದಾಗಿ ತಿಳಿದುಬಂದಿತ್ತು. ಆದರೆ, ಇದೀಗ ಈ ಸಂಖ್ಯೆ ಮೂರು ಲಕ್ಷಕ್ಕೂ ಅಧಿಕವಾಗಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಸಮೀಕ್ಷಾ ವರದಿ ಬಂದ ಬಳಿಕ ಸಫಾಯಿ ಕರ್ಮಚಾರಿಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಮುಂಬರುವ ರಾಜ್ಯ ಬಜೆಟ್ನಲ್ಲಿ ನಿಗಮಕ್ಕೆ ₹ 1 ಸಾವಿರ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಅವರಿಗೆ ಹಾಗೂ ಕೇಂದ್ರ ಸರ್ಕಾರದಿಂದ ₹ 500 ಕೋಟಿ ಅನುದಾನ ನೀಡುವಂತೆ ಕೋರಿದ್ದೇನೆ ಎಂದು ಹೇಳಿದರು.
ಕಳೆದ ಬಜೆಟ್ನಲ್ಲಿ ನಿಗಮಕ್ಕೆ ಮಂಜೂರಾಗಿದ್ದ ₹66 ಕೋಟಿ ಅನುದಾನ ಕೋವಿಡ್ ಸಂಕಷ್ಟದಿಂದಾಗಿ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗದೇ ನಿರೀಕ್ಷಿತ ಕೆಲಸ, ಕಾರ್ಯಗಳು ನಡೆದಿಲ್ಲ. ಇದೀಗ ನಿಧಾನವಾಗಿ ಅನುದಾನ ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರಲೆ, ಮುಖಂಡರಾದ ಮಲ್ಲಿಕಾರ್ಜುನ ಹಳೆಮನಿ, ಚಿದಾನಂದ ಚಲುವಾದಿ, ಗೋಪಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.