ಸಂತ್ರಸ್ತರ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆ: ಅಶೋಕ

ಮಡಿಕೇರಿ: ‘ರಾಜ್ಯದಲ್ಲಿ 2019 ಹಾಗೂ 2020ನೇ ಸಾಲಿನಲ್ಲಿ ಪ್ರವಾಹದಿಂದ ಸಂತ್ರಸ್ತರಾದವರ ಮನೆ ನಿರ್ಮಾಣಕ್ಕೆ ಎರಡು ಹಾಗೂ ಮೂರನೇ ಕಂತಿನ ಹಣ ಪಾವತಿಸಲು, ₹ 80 ಕೋಟಿಯನ್ನು ಈ ವಾರ ಬಿಡುಗಡೆ ಮಾಡಲಾಗುವುದು’ ಎಂದು ಕಂದಾಯ ಸಚಿವ ಆರ್.ಅಶೋಕ ಇಲ್ಲಿ ಮಂಗಳವಾರ ಭರವಸೆ ನೀಡಿದರು.
‘ಕಂದಾಯ ಇಲಾಖೆ ಮೂಲಕವೇ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಹಣ ಪಾವತಿಸಲಾಗುತ್ತಿತ್ತು. ಆದರೆ, ಆಯಾ ಜಿಲ್ಲಾಧಿಕಾರಿಗಳಿಗೆ ಕೆಲಸದ ಒತ್ತಡವಿದ್ದ ಕಾರಣಕ್ಕೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ಈ ಜವಾಬ್ದಾರಿ ವಹಿಸಲಾಗಿತ್ತು. ತಕ್ಷಣವೇ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಹೇಳಿದರು.
‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ‘ಪ್ರಗತಿ ಕಾಣದ ಪುನರ್ವಸತಿ’ ಹಾಗೂ ‘ಇನ್ನೂ ಕೈಸೇರಿಲ್ಲ ಪರಿಹಾರ ಹಣ’ ಎಂಬ ವರದಿಗಳು ಒಳನೋಟದಲ್ಲಿ ಪ್ರಕಟವಾಗಿದ್ದವು.
‘ಭೂಪರಿವರ್ತನೆ ಕಡತ ವಿಲೇವಾರಿ ಮಾಡಲು ರಾಜ್ಯದ ಬಹುತೇಕ ಜಿಲ್ಲಾಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಭೂಪರಿವರ್ತನೆ ಮಾಡದಿರುವ ಕಾರಣಕ್ಕೆ ಆದಾಯವೂ ಬರುತ್ತಿಲ್ಲ. ಮೂರು ತಿಂಗಳ ಒಳಗೆ ಕಡತ ವಿಲೇವಾರಿ ಮಾಡಬೇಕು. ವಿಳಂಬ ಮಾಡುತ್ತಿರುವ ಕಾರಣಕ್ಕೆ ಕೈಗಾರಿಕೆಗಳೂ ಅನ್ಯ ರಾಜ್ಯದ ಪಾಲಾಗುತ್ತಿವೆ. ವಿಳಂಬ ಮಾಡಿದರೆ ಭೂಪರಿವರ್ತನೆ ಪದವನ್ನೇ ಬದಲಾವಣೆ ಮಾಡಬೇಕಾಗಬಹುದು’ ಎಂದು ಆಕ್ರೋಶ ಹೊರಹಾಕಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.