ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮಾನತೆ ಮತ್ತು ನಿರುದ್ಯೋಗ ಸಮಸ್ಯೆ ಬಗ್ಗೆ ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಕಳವಳ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರಕ್ಕೆ ಇಳಿದಿದೆ.
ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಬ್ ಚೆಂಗಾಸಿ ಎನ್ನುತ್ತಿದ್ದ ಬಿಜೆಪಿ ನಾಯಕರು ಆರ್ಎಸ್ಎಸ್ ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ ಎಂದಿದೆ.
ಆರಂಭದಲ್ಲಿ ಆರ್ಎಸ್ಎಸ್ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ, ನಿರುದ್ಯೋಗದ ಬಗ್ಗೆ ಕಾಳಜಿಯಿಂದ ಮಾತನಾಡಿರುವುದು ಆಶ್ಚರ್ಯಕರ ಎಂದು ಕಾಂಗ್ರೆಸ್ ಹೇಳಿದೆ. ಬಳಿಕ ಹೊಸಬಾಳೆ ಅವರ ಹೇಳಿಕೆಗೆ ಬಿಜೆಪಿ ಪ್ರತಿಕ್ರಿದಿರುವ ಬಗ್ಗೆ ವಾಗ್ದಾಳಿ ನಡೆಸಿದೆ.
ಈ ಬೆಳವಣಿಗೆ 'ಮೋದಿ ಹಠಾವೊ' ಯೋಜನೆಯ ಮುನ್ನುಡಿಯೇ? ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ #BharatJodoYatra ಮಾಡಲು ಶುರು ಮಾಡಿದಮೇಲೆ ದೇಶದ ಆರ್ಥಿಕತೆಯ ದುಸ್ಥಿತಿ, ಬಡತನ ನಿರುದ್ಯೋಗದ ಬಗ್ಗೆ RSSಗೆ ಕಾಳಜಿ ಬಂದಿರುವುದು ಆಶ್ಚರ್ಯಕರ!
"ಸಬ್ ಚೆಂಗಾಸಿ" ಎನ್ನುತ್ತಿದ್ದ @BJP4Karnataka ನಾಯಕರು RSS ಹೇಳಿಕೆ ಬಗ್ಗೆ ಬಾಯಿ ಬಿಡದಿರುವುದು ಇನ್ನೂ ಆಶ್ಚರ್ಯಕರ!
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆಯ ಪರಿಣಾಮ ಆರ್ಎಸ್ಎಸ್ ರಾಷ್ಟ್ರದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಅಸಮಾನತೆ, ಬಡತನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ಸೋಮವಾರ ಕಾಂಗ್ರೆಸ್ ಹೇಳಿತ್ತು.
ದತ್ತಾತ್ರೇಯ ಹೊಸಬಾಳೆ ವ್ಯಕ್ತಪಡಿಸಿದ ಕಳವಳ ಸತ್ಯ ಎಂದು ಮೀನುಗಾರಿಕೆ ಸಚಿವ ಎಸ್.ಅಂಗಾರ ಸ್ಪಷ್ಟಪಡಿಸಿದ್ದರು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಸ್ಪರ್ಧೆಯ ನಡುವೆಯೂ ದೇಶಕ್ಕೆ ಒಂದು ಆರ್ಥಿಕ ನೀತಿ ಇರಬೇಕು. ಆದರೆ, ಅದು ನಮ್ಮ ದೇಶದಲ್ಲಿ ಇರಲಿಲ್ಲ. ಬಿಜೆಪಿ ಹಾಗೂ ಸಂಘಕ್ಕೆ ಆ ರೀತಿಯ ಆರ್ಥಿಕ ನೀತಿ ಇದೆ ಎಂದು ಸಮರ್ಥಿಸಿಕೊಂಡಿದ್ದರು.