ಕಲಬುರ್ಗಿ: ‘ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣದ ಶಂಕು ಸ್ಥಾಪನೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ನೀಡಿದ್ದ ಜಾಹಿರಾತಿನಲ್ಲಿ ಅನುಭವ ಮಂಟಪ ಸನಾತನ ಪ್ರಗತಿಪರ ಚಿಂತನೆಗಳ ಮರುಸೃಷ್ಟಿ ಎಂದು ಹೇಳಲಾಗಿದೆ. ಇದೊಂದು ದೊಡ್ಡ ಪ್ರಮಾದ. ಸರ್ಕಾರ ಕೂಡಲೇ ಕ್ಷಮೆಯಾಚಿಸಿ ಸ್ಪಷ್ಟೀಕರಣ ನೀಡಬೇಕು’ ಎಂದು ಬೆಂಗಳೂರಿನ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಣ್ಣು ಮಕ್ಕಳಿಗೆ, ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಧಾರ್ಮಿಕ ಸ್ವಾತಂತ್ರ್ಯವಿಲ್ಲ ಎಂದು ಸನಾತನ ಧರ್ಮ ಹೇಳುತ್ತದೆ. ಅನುಭವ ಮಂಟಪ ಎಲ್ಲರಿಗೂ ಧರ್ಮ ಸಂಸ್ಕಾರ ಕೊಟ್ಟು ಸಮಾನತೆ ಬೋಧಿಸಿದೆ. ಹೀಗಿರುವಾಗ ಅನುಭವ ಮಂಟಪದ ಮೂಲ ಆಶಯಕ್ಕೆ ವಿರುದ್ಧವಾದ ಪದವನ್ನು ನಮ್ಮ ಮೇಲೆ ಹೊರಟಿರುವುದು ದೊಡ್ಡ ದುರಂತ’ ಎಂದು ಸ್ವಾಮೀಜಿ ಕಿಡಿಕಾರಿದರು.
‘ಬೇರೆ ಕಡೆ ಎಷ್ಟೇ ಅನುಭವ ಮಂಟಪ ನಿರ್ಮಿಸಿದರೂ ಶರಣರು ಸ್ಥಾಪಿಸಿದ್ದ ಮೂಲ ಅನುಭವ ಮಂಟಪ ಎಲ್ಲಿದೆ ಎಂಬುದು ಕೋಟ್ಯಂತರ ಬಸವಭಕ್ತರಿಗೆ ಪ್ರಶ್ನೆಯಾಗಿಯೆ ಉಳಿಯುತ್ತದೆ. ಆದ್ದರಿಂದ ಸರ್ಕಾರ ಅನುಭವ ಮಂಟಪದ ಮೂಲಸ್ಥಳವನ್ನು ಪತ್ತೆ ಹಚ್ಚಿ ಅಲ್ಲಿಯೇ ಸ್ಮಾರಕ ನಿರ್ಮಿಸಬೇಕು’ ಎಂದು ಅವರು ಒತ್ತಾಯಿಸಿದರು.