ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯರ ‍‍ಪ್ರತಿಭೆ ಸದ್ಬಳಕೆಗೆ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

Last Updated 1 ಅಕ್ಟೋಬರ್ 2022, 19:16 IST
ಅಕ್ಷರ ಗಾತ್ರ

ಬೆಂಗಳೂರು: ‘ಹಿರಿಯ ನಾಗರಿಕರ ಪ್ರತಿಭೆ ಸದ್ಬಳಕೆ ಮಾಡಿಕೊಳ್ಳಲು ಹೊಸ ಯೋಜನೆ ರೂಪಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಶನಿವಾರ ಹಮ್ಮಿಕೊಂಡಿದ್ದವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಶಕ್ತರಾಗಿರುವ, ಕ್ರಿಯಾಶೀಲ ನಾಗರಿಕರ ಪಟ್ಟಿ ಸಿದ್ಧಗೊಳಿಸಲಾಗುವುದು. ಸರ್ಕಾರದ ವಿವಿಧ ಹಂತಗಳಲ್ಲಿ ಅವರ ಅನುಭವ, ಸಲಹೆ ಪಡೆದುಕೊಳ್ಳಲಾಗುವುದು. ಇದರಿಂದ ಸರ್ಕಾರದ ಮಟ್ಟದಲ್ಲಿ ಆಗುವ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಬಹುದು ಎಂದರು.

60 ವರ್ಷ ಮೇಲ್ಪಟ್ಟ ನಾಗರಿಕರ ಆರೋಗ್ಯ ವರ್ಷಕ್ಕೆ ಎರಡು ಬಾರಿ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಕಣ್ಣಿನ ತೊಂದರೆ ಇರುವವರಿಗೆ ಸರ್ಕಾರವೇ ಉಚಿತ ಕನ್ನಡಕ ನೀಡಲಿದೆ. ಶ್ರವಣ ಸಾಧನಗಳ ವಿತರಣೆಗಾಗಿಯೇ ₹ 500 ಕೋಟಿ ಮೀಸಲಿಡಲಾಗಿದೆ. ಡಯಾಲಿಸಿಸ್ ಸೇರಿದಂತೆ ಎಲ್ಲ ರೀತಿಯ ಆರೈಕೆಯಲ್ಲೂ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ವಿವರ ನೀಡಿದರು.

ಈಚಿನ ದಿನಗಳಲ್ಲಿ ವೃದ್ಧಾಶ್ರಮ ಸಂಸ್ಕೃತಿ ಆರಂಭವಾಗಿರುವುದು ನೋವಿನ ಸಂಗತಿ. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂಕೇತ. ವೃದ್ಧಾಶ್ರಮಗಳಲ್ಲಿ ಆಶ್ರಯ ಪಡೆದವರ ಆರೈಕೆಗೆ ಒತ್ತು ನೀಡಿರುವ ಸರ್ಕಾರ, ಪ್ರತಿ ವೃದ್ಧಾಶ್ರಮಕ್ಕೂ ₹ 12 ಲಕ್ಷ ವಾರ್ಷಿಕ ಅನುದಾನ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ್, ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ 57 ಲಕ್ಷ ನಾಗರಿಕರು ಇದ್ದಾರೆ. ಅವರಲ್ಲಿ 46.80 ಲಕ್ಷ ನಾಗರಿಕರಿಗೆ ಪ್ರತಿ ತಿಂಗಳು ₹ 1,200 ವೇತನ ನೀಡಲಾಗುತ್ತಿದೆ ಎಂದು
ಹೇಳಿದರು.

ಸಾಧಕರಾದ ಎಂ.ಎಂ.ಬೋಪಯ್ಯ, ಡಾ.ಬಿ.ಕೆ.ಬಸವರಾಜ ರಾಜಋಷಿ, ವೆಂಕಪ್ಪ ಅಂಬಾಜಿ ಸುಗತೇಕರ, ಡಾ.ಕೆ.ಜಿ.ಕುಲಕರ್ಣಿ, ವಿಜಯಾ ರಮೇಶ್, ಡಾ.ಕೋಡೂರು ವೆಂಕಟೇಶ್‌ ಹಾಗೂ ಸಾವಿತ್ರಮ್ಮ ರಾಮಶರ್ಮ ಸೇವಾ ಟ್ರಸ್ಟ್‌ಗೆ ಪ್ರಶಸ್ತಿ ನೀಡಿ, ಗೌರವಿಸಲಾಯಿತು.

ಸಚಿವರಾದ ವಿ.ಸೋಮಣ್ಣ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರಾದ ರವಿ ಸುಬ್ರಹ್ಮಣ್ಯ, ರವಿಕುಮಾರ್, ಉದಯ ಗರುಡಾಚಾರ್, ವಾಗ್ಮಿ ಇಂದುಮತಿ ಸಾಲಿಮಠ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT