ನವದೆಹಲಿ: ನೂತನ ಮುಖ್ಯಮಂತ್ರಿ ಆಯ್ಕೆ ಹಿನ್ನೆಲೆಯಲ್ಲಿ ಸಂಜೆ ಬೆಂಗಳೂರಿನ ರಾಜಭವನ ರಸ್ತೆಯ ಕ್ಯಾಪಿಟಲ್ ಹೋಟೆಲ್ನಲ್ಲಿ ಕರ್ನಾಟಕದ ಶಾಸಕರ ಸಭೆ ಆಯೋಜಿಸಲಾಗುವುದು ಎಂದು ಕೇಂದ್ರ ಸಚಿವ ಜಿ.ಕಿಷನ್ ರೆಡ್ಡಿ ತಿಳಿಸಿದ್ದಾರೆ.
ಕೇಂದ್ರದ ಇನ್ನೊಬ್ಬ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಅರುಣ್ ಸಿಂಗ್ ಬದಲಿಗೆ ವೀಕ್ಷಕರಾಗಿ ತೆರಳುತ್ತಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದ್ದಾರೆ.
'ಸಂಜೆ 5 ಗಂಟೆಯ ವೇಳೆಗೆ ಪ್ರಧಾನ್ ಜೊತೆ ಬೆಂಗಳೂರು ತಲುಪಲಿದ್ದೇನೆ ಎಂದ ಅವರು, 7ಕ್ಕೆ ಹೋಟೆಲ್ ಕ್ಯಾಪೊಟಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ ಆಯೋಜಿಸಲಾಗುವುದು' ಎಂದು ಹೇಳಿದ್ದಾರೆ.
ಶಾಸಕರು ಮಾತ್ರವಲ್ಲದೆ ಪಕ್ಷದ ರಾಜ್ಯ ಮುಖಂಡರು ಹಾಗೂ ಹಂಗಾಮಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಆರ್ ಎಸ್ ಎಸ್ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುವ ಸಾಧ್ಯತೆ ಇದೆ.
ಈ ಮೊದಲು ಪಕ್ಷದ ವರಿಷ್ಠರು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ವೀಕ್ಷಕರನ್ನಾಗಿ ಕಳುಹಿಸಲು ನಿರ್ಧರಿಸಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಕಿಷನ್ ರೆಡ್ಡಿ ಅವರನ್ನು ವೀಕ್ಷಕರನ್ನಾಗಿ ನೇಮಿಸಿದರು.
ಧರ್ಮೇಂದ್ರ ಪ್ರಧಾನ್ ಈ ಹಿಂದೆ ಪಕ್ಷದ ರಾಜ್ಯ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದರೆ, ಕಿಷನ್ ರೆಡ್ಡಿ ಕರ್ನಾಟಕದ ನೆರೆಯ ತೆಲಂಗಾಣ ರಾಜ್ಯದವರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೂ ಸಭೆಗಳಲ್ಲಿ ಪಾಲ್ಗೊಳ್ಳಲು ಈಗಾಗಲೇ ಬೆಂಗಳೂರಿನತ್ತ ತೆರಳಿದ್ದಾರೆ.