ಮಸ್ಕಿ: ‘ನಾನು ಉಪ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಬಯಕೆಯಾಗಿದೆ’ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ದೆಹಲಿಯಿಂದ ಗ್ರಾಮ ಪಂಚಾಯಿತಿವರೆಗೆ ಬಿಜೆಪಿಯೇ ಅಧಿಕಾರದಲ್ಲಿರಬೇಕು, ಕಾರ್ಯಕರ್ತರನ್ನು ಅಧಿಕಾರದಲ್ಲಿ ಕುಡಿಸಬೇಕು ಎಂಬ ಉದ್ದೇಶದಿಂದ ನಾವು ಕೆಲಸ ಮಾಡುತ್ತೇವೆ, ಅದಕ್ಕಾಗಿ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
‘ಪ್ರತಿಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ಪಕ್ಷವನ್ನು ಬಲಗೊಳಿಸುತ್ತೇವೆ. ಮೊಳಕಾಲ್ಮೂರು ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರಿಸಬೇಕು ಎನ್ನುವುದು ಹೋರಾಟಗಾರರ ಬೇಡಿಕೆ. ಈ ಬಗ್ಗೆ ಮುಖ್ಯಮಂತ್ರಿಗಳೇ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.
‘ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಣಗಳು ಇಲ್ಲ. ಶಾಸಕ ರೇಣುಕಾಚಾರ್ಯ ಹಾಗೂ ಸಚಿವ ರಮೇಶ ಜಾರಕಿಹೊಳೆ ಅವರು ನೀಡಿರುವ ಹೇಳಿಕೆಗಳು ಅವರ ವ್ಯಯಕ್ತಿಕ ಹೇಳಿಕೆಗಳೇ ಹೊರತು ಪಕ್ಷದ ಹೇಳಿಕೆಗಳಲ್ಲ’ ಎಂದರು.
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಅರಣ್ಯ ಸಚಿವ ಆನಂದಸಿಂಗ್, ಸಂಸದರಾದ ಕರಡಿ ಸಂಗಣ್ಣ, ರಾಜಾ ಅಮರೇಶ್ವರ ನಾಯಕ, ಮುಖಂಡ ಪ್ರತಾಪಗೌಡ ಪಾಟೀಲ್ ಇದ್ದರು.