ಬೆಂಗಳೂರು: ‘ಮುಸ್ಲಿಮರ ವಿಚಾರದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನಸ್ಥಿತಿ ಒಂದೇ ಆಗಿದೆ’ ಎಂದು ಬಿಜೆಪಿ ರಾಜ್ಯ ಘಟಕ ಟ್ವಿಟರ್ನಲ್ಲಿ ವಾಗ್ದಾಳಿ ನಡೆಸಿದೆ.
ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಗುರುವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ, ‘ಐಎಸ್ ಸಂಘಟನೆ ಇಸ್ಲಾಮಿಕ್ ರಾಜ್ಯ ಸ್ಥಾಪನೆಗಾಗಿ ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದೆ. ಅದೇ ರೀತಿಯಲ್ಲಿ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಮುಸ್ಲಿಂ ಸಮುದಾಯದ ಹೆಸರು ಬಳಸಿಕೊಳ್ಳುತ್ತಿದ್ದಾರೆ. ಇಬ್ಬರಿಂದಲೂ ಅವಮಾನವಾಗುತ್ತಿರುವುದು ಮುಸ್ಲಿಂ ಸಮುದಾಯಕ್ಕೆ’ ಎಂದು ಹೇಳಿದೆ.
ಪಂಜಾಬ್ ರೈತರ ಹೋರಾಟದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಇಂದಿರಾಗಾಂಧಿಯವರ ಹತ್ಯೆಯ ಬಳಿಕ 1984ರಲ್ಲಿ ಸಿಖ್ ಹತ್ಯಾಕಾಂಡ ನಡೆದಿತ್ತು. ಸಿಖ್ ಸಮುದಾಯವನ್ನು ಕಾಂಗ್ರೆಸ್ ಅಟ್ಟಾಡಿಸಿ ಕೊಂದಿತ್ತು. ದೊಡ್ಡ ಆಲದ ಮರ ಬಿದ್ದಾಗ ನೆಲ ಕಂಪಿಸುವುದು ಸಹಜ ಎಂದು ರಾಜೀವ್ ಗಾಂಧಿಯವರು ಸಿಖ್ ಹತ್ಯಾಕಾಂಡದ ಕುರಿತು ಹೇಳಿಕೆ ನೀಡಿದ್ದರು. ಅದೇ ಕಾಂಗ್ರೆಸ್ ಈಗ ಸಿಖ್ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ’ ಎಂದು ಟೀಕಿಸಿದೆ.
ರೈತರ ಆತ್ಮಹತ್ಯೆ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನಿಮ್ಮ ಅವಧಿಯಲ್ಲಿ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೋದಲ್ಲೆಲ್ಲ ಗಡದ್ದಾಗಿ ನಿದ್ದೆ ಮಾಡುತ್ತಿದ್ದ ನಿಮಗೆ ಈಗ ಇದ್ದಕ್ಕಿದ್ದಂತೆ ರೈತರ ಮೇಲೆ ಪ್ರೇಮ ಉಕ್ಕಿದೆ ಅಲ್ಲವೆ’ ಎಂದು ಪ್ರಶ್ನಿಸಿದೆ.