ಭಟ್ಕಳ: ಸಿಗಂದೂರು ದೇವಸ್ಥಾನಕ್ಕೆ ನೇಮಿಸಿರುವ ಸಲಹಾ ಸಮಿತಿಯನ್ನು ಕೂಡಲೇ ಕೈಬಿಡುವಂತೆ ರಾಮಕ್ಷೇತ್ರ ಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ತಾಲ್ಲೂಕಿನ ಕರಿಕಲ್ನ ರಾಮ ಧ್ಯಾನ ಮಂದಿರದಲ್ಲಿ ಭಾನುವಾರ ನಡೆದ ಹಿಂದುಳಿದ ವರ್ಗಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ‘ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಹಸ್ತಾಂತರಿಸುವ ನಿರ್ಧಾರ ಕೈಬಿಟ್ಟಿರುವ ಮುಖ್ಯಮಂತ್ರಿ ನಿರ್ಧಾರ ಸ್ವಾಗತ. ಆದರೆ ಸಲಹಾ ಸಮಿತಿ ಇನ್ನೂ ಮೂರ್ನಾಲ್ಕು ತಿಂಗಳು ಕಾರ್ಯನಿರ್ವಹಿಸಲಿದೆ ಎಂಬ ಅವರ ಹೇಳಿಕೆ ಸರಿಯಲ್ಲ. ಆ ನಿರ್ಧಾರವನ್ನೂ ಕೈಬಿಡಬೇಕು. ಈಗಿರುವ ಧರ್ಮದರ್ಶಿ ಮಂಡಳಿಗೆ ದೇವಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು.
‘ಸಿಗಂದೂರು ಕ್ಷೇತ್ರದಲ್ಲಿ ಆಡಳಿತಸುಗಮವಾಗಿ ನಡೆಯುತ್ತಿದೆ. ಕೆಲವು ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಈಗ ಸರಿಪಡಿಸಿಕೊಳ್ಳಲಾಗಿದೆ’ ಎಂದು ನಾಮಧಾರಿ ಸಮಾಜದ ಪ್ರಮುಖ ಕುಮಟಾದ ಆರ್.ಜಿ.ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯಲ್ಲಿ ಪ್ರಮುಖರಾದ ಭೀಮಣ್ಣ ನಾಯ್ಕ, ಜೆ.ಡಿ.ನಾಯ್ಕ, ಶಿವಾನಂದ ನಾಯ್ಕ ಇದ್ದರು.