ಚಿತ್ರದುರ್ಗ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಘನತೆಯಿಂದ ಮಾತನಾಡುವುದನ್ನು ಕಲಿಯಬೇಕು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಹೇಳಿಕೆ ನೀಡುವುದು ತಪ್ಪು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಕಿಡಿಕಾರಿದರು.
ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಜಾಬ್, ಸೆರಗು ಹಾಗೂ ಮಠಾಧೀಶರ ಶಿರವಸ್ತ್ರದ ಕುರಿತು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ಕೊಟ್ಟರು.
ನಿರ್ದಿಷ್ಟ ಜಾತಿ, ಜನಾಂಗ ತೆಗಳುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮಾತುಗಳು ಅವರಿಗೇ ಮುಳುವಾಗಲಿವೆ. ಹಿಜಾಬ್ ವಿವಾದ ಸೃಷ್ಟಿ ಆಗಲು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ನಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಕಂದಕ ಹೆಚ್ಚಾಗುತ್ತಿದೆ. ಮುಖ್ಯಮಂತ್ರಿ ಗಾದಿಗೆ ಪೈಪೋಟಿ ತೀವ್ರವಾಗಿದೆ. ಇದರಿಂದ ಹತಾಷೆಗೆ ಒಳಗಾಗಿರುವ ಸಿದ್ದರಾಮಯ್ಯ ಮನಸೊ ಇಚ್ಛೆ ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದರು.
ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಆರಂಭದಲ್ಲಿ ಯಾರೊಬ್ಬರೂ ನೋಡಲಿಲ್ಲ. ಆ ಬಳಿಕ ಚಿತ್ರಮಂದಿರಗಳು ಭರ್ತಿಯಾಗಿವೆ. ಪ್ರೇಕ್ಷಕರ ಅಪೇಕ್ಷೆ ಮೇರೆಗೆ ಸಿನಿಮಾ ಬದಲಾವಣೆ ಆಗುತ್ತವೆ. ಇರುವ ಸಿನಿಮಾ ತೆಗೆದು ಮತ್ತೊಂದು ಸಿನಿಮಾ ಹಾಕುವಂತೆ ಯಾರೂ ಸೂಚನೆ ನೀಡಿಲ್ಲ. ಜೇಮ್ಸ್ ಸಿನಿಮಾ ಹೆಸರಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.