ಉಡುಪಿ: ಕೃಷ್ಣಮಠದಲ್ಲಿ ಶುಕ್ರವಾರ ಶ್ರದ್ಧಾ–ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಕೃಷ್ಣನಿಗೆ ಮಹಾ ಪೂಜೆ ನೆರವೇರಿಸಿದರು.
ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಕೃಷ್ಣನಿಗೆ ಯಶೋಧೆ ಅಲಂಕಾರ ಮಾಡಿದರು. ಸಾವಿರಾರು ಭಕ್ತರು ಕೃಷ್ಣನ ದರ್ಶನ ಮಾಡಿದರು. ಕೃಷ್ಣಮಠದ ಒಳಾಂಗಣಕ್ಕೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು.
ಕೃಷ್ಣಮಠದಲ್ಲಿ ಕೃಷ್ಣ ವೇಷ ಸ್ಪರ್ಧೆಗಳು ನಡೆದವು. ರಥಬೀದಿಯಲ್ಲಿ ಹುಲಿಕುಣಿತ ಪ್ರದರ್ಶನ ನಡೆಯಿತು. ವೇಷಧಾರಿಗಳು ರಂಜಿಸಿದರು. ರಾಜಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಆ.20ರಂದು ಮಧ್ಯಾಹ್ನ ವಿಟ್ಲಪಿಂಡಿ ಉತ್ಸವ ನಡೆಯಲಿದ್ದು ಕೃಷ್ಣನ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಮೆರವಣಿಗೆ ಮಾಡಲಾಗುವುದು. ರಥಬೀದಿಯಲ್ಲಿ ಸಾಂಪ್ರದಾಯಿಕ ಮೊಸರು ಕುಡಿಕೆ ಒಡೆಯುವ ಆಚರಣೆ ನಡೆಯಲಿದೆ. ಈ ದೃಶ್ಯವನ್ನು ಕಣ್ತುಂಬಿ ಕೊಳ್ಳಲು ಸಾವಿರಾರು ಮಂದಿ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ.