ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೌತೆ' ಚಂಡಮಾರುತ: ಭಾರಿ ಗಾಳಿ, ಕರಾವಳಿಯಲ್ಲಿ ಅಪಾರ ನಷ್ಟ

ಕುಮಟಾ, ಹೊನ್ನಾವರದಲ್ಲಿ ಪರಿಹಾರ ಕೇಂದ್ರ l ಹಲವೆಡೆ ವಿದ್ಯುತ್ ಸಂಪರ್ಕ ಕಡಿತ l ರಸ್ತೆ–ಸೇತುವೆ ಕುಸಿತ
Last Updated 16 ಮೇ 2021, 19:42 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಬ್ಬರಿಸುತ್ತಿರುವ ‘ತೌತೆ' ಚಂಡಮಾರುತವು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹೊನ್ನಾವರ, ಅಂಕೋಲಾ, ಭಟ್ಕಳದ ಮುರ್ಡೇಶ್ವರಗಳಲ್ಲಿ ಅಪಾರ ಹಾನಿಯುಂಟು ಮಾಡಿದೆ. ಹೊನ್ನಾವರ ಮತ್ತು ಕುಮಟಾ ತಾಲ್ಲೂಕು ಗಳಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯ ಲಾಗಿದ್ದು, ನೂರಾರು ಮಂದಿ ಆಶ್ರಯ ಪಡೆದುಕೊಂಡಿದ್ದಾರೆ.

ಗೋವಾದ ಮಡಗಾಂ ಮತ್ತು ತಿವಿಮ್ ನಡುವೆ ಕೊಂಕಣ ರೈಲ್ವೆ ಹಳಿಗಳ ಮೇಲೆ ಐದು ಕಡೆ ಮರಗಳು ಬಿದ್ದಿದ್ದವು. ಇದರಿಂದ ತಿರುವನಂತಪುರ ಸೆಂಟ್ರಲ್- ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ಸಂಚರಿಸುವ ರೈಲು (ಸಂಖ್ಯೆ 06346) ಮೂರು ತಾಸು ವಿಳಂಬವಾಗಿ ಸಾಗುತ್ತಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರವಾರ ನಗರದಲ್ಲಿ 76 ವಿದ್ಯುತ್ ಕಂಬಗಳು, 14 ವಿದ್ಯುತ್ ಪರಿವರ್ತಕಗಳಿಗೆ ಹಾನಿಯಾಗಿದೆ. ಇದರಿಂದ ಶನಿವಾರ ಸಂಜೆ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಭಾನುವಾರ ಸಂಜೆಯಾದರೂ ಸರಿಯಾಗಿರಲಿಲ್ಲ. ವಿದ್ಯುತ್ ಸಂಪರ್ಕ ಪುನರ್ ಸ್ಥಾಪಿಸಲು ಹೆಸ್ಕಾಂ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತಾಲ್ಲೂಕಿನ ಏಳು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದೇ ರೀತಿಯ ಸನ್ನಿವೇಶ ಅಂಕೋಲಾ ದಲ್ಲೂ ಕಂಡುಬಂತು.

ನಗರದಲ್ಲಿ ಶನಿವಾರ ರಾತ್ರಿ ಭಾರಿ ವೇಗದಲ್ಲಿ ಗಾಳಿ ಬೀಸಲು ಶುರು ವಾಗಿದ್ದು, ಭಾನುವಾರ ಮಧ್ಯಾಹ್ನ ದವರೆಗೂ ಮುಂದುವರಿಯಿತು.
ಮಧ್ಯಾ ಹ್ನದ ನಂತರ ಆಗಾಗ ಜೋರಾಗಿ ಮಳೆಯಾಯಿತು. ಗಾಳಿಯ ರಭಸಕ್ಕೆ ಸಮುದ್ರವೂ ಪ್ರಕ್ಷುಬ್ಧವಾಗಿದ್ದು, ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರದ ಈ ರೌದ್ರಾವತಾರವನ್ನು ನೋಡಿದ ಹಲವರು, 2008ರಲ್ಲಿ ಉಂಟಾಗಿದ್ದ ಸುನಾಮಿಯನ್ನು ನೆನಪಿಸಿ ಕೊಂಡರು.

ಭಟ್ಕಳದ ಮುರ್ಡೇಶ್ವರ ಸಮುದ್ರ ತೀರದಲ್ಲಿ ಪ್ರವಾಸಿಗರಿಗಾಗಿ ಇದ್ದ ದೋಣಿಗಳು, ಮನರಂಜನಾ ಸಾಮಗ್ರಿಗಳು ಹಾಗೂ ಹತ್ತಾರು ಗೂಡಂಗಡಿಗಳಿಗೆ ಹಾನಿಯಾಗಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾಗಿವೆ. ಹೊನ್ನಾವರ ತಾಲ್ಲೂಕಿನಲ್ಲಿ ಒಟ್ಟು 24 ಮನೆಗಳಿಗೆ ಹಾನಿಯಾಗಿದ್ದು ಮಾವಿನಕುರ್ವೆ ಪರಿಹಾರ ಕೇಂದ್ರ ತೆರೆಯಲಾಗಿದ್ದು 60 ಜನ ಆಶ್ರಯ ಪಡೆದಿದ್ದಾರೆ. ಅಂಕೋಲಾದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಅಂದಾಜು1.39 ಹೆಕ್ಟೇರ್ ಪ್ರದೇಶದ ಕಲ್ಲಂಗಡಿ ಬೆಳೆ ನಾಶವಾಗಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ರಾತ್ರಿಯಿಂದಲೇ ಧಾರಾಕಾರ ಮಳೆಯಾಗಿದ್ದು, ಹಾನಿಯಾದ ವರದಿಗಳಿಲ್ಲ.

ಬೆಳಗಾವಿ ನಗರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದಿನ ವಿಡೀ ಜೋರು ಗಾಳಿ ಹಾಗೂ ಮಳೆ ಮುಂದುವರಿಯಿತು. ಖಾನಾಪುರ ತಾಲ್ಲೂಕಿನ ಪಾರವಾಡದಲ್ಲಿಜೋರು ಗಾಳಿ-ಮಳೆಯಿಂದಾಗಿ ಸರ್ಕಾರಿ ಶಾಲೆ ಹಾಗೂ ಕೆಲವು ಮನೆಗಳ ಹೆಂಚುಗಳು ಮತ್ತು ತಗಡಿನ ಶೀಟುಗಳು ಹಾರಿ ಹೋಗಿವೆ. ಬೆಳಗಾವಿ ತಾಲ್ಲೂಕಿನ ಖನಗಾಂವ ಕೆ.ಎಚ್. ಗ್ರಾಮದಲ್ಲಿ 4 ವಿದ್ಯುತ್‌ ಕಂಬಗಳು ಧರೆಗುರುಳಿದವು. ಬಹುತೇಕ ಕಡೆಗಳಲ್ಲಿ ವಿದ್ಯುತ್‌ ಕಡಿತ ಗೊಂಡಿದ್ದರಿಂದ ಜನರು ತೊಂದರೆ ಅನುಭವಿಸಿದರು.

ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿಯೂ ಬೆಳಗಿನಿಂದ ಮಳೆ ಸುರಿದೆ.

ಶಿವಮೊಗ್ಗ: ಕೆಲವೆಡೆ ಜೋರು ಮಳೆ

(ಶಿವಮೊಗ್ಗ): ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯ ಎಲ್ಲೆಡೆ ಬೆಳಿಗ್ಗೆಯಿಂದ ಮೋಡ ಕವಿದ ವಾತಾ ವರಣ ಇದ್ದು, ಭಾನುವಾರ ಕೆಲವೆಡೆ ಮಳೆಯಾಗಿದೆ.

ತೀರ್ಥಹಳ್ಳಿ, ಹೊಸನಗರ ಭಾಗ ದಲ್ಲಿ ಜೋರು ಮಳೆಯಾಗಿದ್ದು, ಕೋಣಂದೂರು ಸಮೀಪದ ಉಂಬ್ಳೆಬೈಲಿನಲ್ಲಿ ಭತ್ತದ ಫಸಲು ನಾಶವಾಗಿದೆ. ಸೊರಬ, ಸಾಗರದಲ್ಲಿ ಸಾಧಾರಣ ಮಳೆಯಾಗಿದೆ. ಶಿಕಾರಿಪುರದಲ್ಲಿ ಬೆಳಿಗ್ಗೆಯಿಂದಲೇ ತುಂತರು ಮಳೆಯಾಗಿದೆ.

ತೀರ್ಥಹಳ್ಳಿ ಭಾಗದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ತುಂಗಾ ಜಲಾಶಯ ಭರ್ತಿಯಾಗುತ್ತಿದೆ. ಒಂದು ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ 1,000 ಕ್ಯುಸೆಕ್ ನೀರು ಹರಿಸಲಾಗಿದೆ.

ಮಳೆ: ಕೊಡಗಿನಲ್ಲಿ ಅಪಾರ ಹಾನಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಗಾಳಿಯಿಂದ ಅಪಾರ
ಹಾನಿ ಸಂಭವಿಸಿದೆ.

ಭಾನುವಾರ ಮಧ್ಯಾಹ್ನ ತನಕವೂ ಅಬ್ಬರಿಸಿದ ಮಳೆ ಬಳಿಕ ಕೊಂಚ ಬಿಡುವು ನೀಡಿತು. ಕಾವೇರಿ ನದಿ ಸೇರಿದಂತೆ ಹಳ್ಳಗಳಲ್ಲಿ ನೀರಿನಮಟ್ಟ ಏರಿಕೆಯಾಗಿದೆ. ನಿರಂತರವಾಗಿ ಸುರಿದ ಮಳೆಯಿಂದ ಬತ್ತಿದ್ದ ತೊರೆ– ತೋಡುಗಳು ಜೀವ ಕಳೆ ಪಡೆದವು. ಭಾರಿ ಮಳೆಯಿಂದ ಕಾಫಿ ತೋಟದಲ್ಲಿ ಕೆಲಸಕ್ಕೆ ಅಡಚಣೆ ಉಂಟಾಯಿತು.

ಪೊನ್ನಂಪೇಟೆಯ ಹುದಿಕೇರಿ ಮುಖ್ಯರಸ್ತೆಯಲ್ಲಿ ಸೇತುವೆಯ ದಡ ಕಸಿದಿದೆ. ಬಲಮುರಿಯ ಕಿರುಸೇತುವೆಯ ಹಂತಕ್ಕೆ ಕಾವೇರಿ ನೀರಿನ ಹರಿವಿತ್ತು. ಬಲಮುರಿ-ಪಾರಾಣೆ ಸಂಪರ್ಕ ರಸ್ತೆಯಲ್ಲಿ ರಸ್ತೆ ಕುಸಿದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ನಾಪೋಕ್ಲು ವ್ಯಾಪ್ತಿಯ ಅಲ್ಲಲ್ಲಿ ವಿದ್ಯುತ್ ಕಂಬಗಳ ಮೇಲೆ ಮರ ಉರುಳಿದ್ದು, ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭೇತ್ರಿ -ಹೆಮ್ಮಾಡು ಬಳಿ ನಿರ್ಮಾಣ ಹಂತದಲ್ಲಿರುವ ಸೇತುವೆ ಕಾಮಗಾರಿ ಸಾಮಗ್ರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು ನಷ್ಟವಾಗಿದೆ.

ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಕೆಲವೆಡೆ ಸಾಧಾರಣ ಮಳೆಯಾಯಿತು.

ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಅರಕಲಗೂಡಿನಲ್ಲಿ ತುಂತುರು ಮಳೆಯಾಗಿದೆ.

ಕೆಲ ವಿಮಾನಗಳ ಹಾರಾಟ ರದ್ದು

ಬೆಳಗಾವಿ: ಪ್ರತಿಕೂಲ ಪರಿಸ್ಥಿತಿಯಿಂದಾಗಿ ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಕೆಲ ವಿಮಾನಗಳ ಹಾರಾಟ ರದ್ದುಗೊಳಿಸಲಾಯಿತು. ಹೈದರಾಬಾದ್, ಬೆಂಗಳೂರು, ತಿರುಪತಿ ಮಾರ್ಗಗಳಲ್ಲಿ ವಿಮಾನ ಸಂಚಾರ ರದ್ದುಗೊಳಿಸಲಾಯಿತು. ಇಂದೋರ್, ಜೋಧಪುರ, ಮುಂಬೈ ಮಾರ್ಗಗಳಲ್ಲಿ ಹಾರಾಟ ನಡೆಸಿದವು ಎಂದು ವಿಮಾನನಿಲ್ದಾಣ ನಿರ್ದೇಶಕ ರಾಜೇಶಕುಮಾರ ಮೌರ್ಯ ತಿಳಿಸಿದರು.

ಕರಾವಳಿಯಲ್ಲಿ ತಗ್ಗಿದ ಕಡಲ್ಕೊರೆತ

ಮಂಗಳೂರು: ಕರಾವಳಿ ಹಾಗೂ ಚಿಕ್ಕಮಗಳೂರಿನಲ್ಲಿ ಭಾನುವಾರ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಹಲವೆಡೆ ಮನೆಗಳಿಗೆ ಹಾನಿಯಾಗಿದ್ದು, ವಿದ್ಯುತ್ ಕಂಬಗಳು, ಮರಗಳು ನೆಲಕ್ಕೆ ಉರುಳಿವೆ.

ಮಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 84 ಗ್ರಾಮಗಳಲ್ಲಿ ಹಾನಿ ಉಂಟಾಗಿದೆ. 14 ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು, 108 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಟ್ಟು 380 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

‘ಎನ್‌ಡಿಆರ್‌ಎಫ್‌ ತಂಡ ಜಿಲ್ಲೆಗೆ ಬಂದಿದ್ದು, ತುರ್ತು ಸಂದರ್ಭದ ಕಾರ್ಯಾಚರಣೆಗೆ ಸನ್ನದ್ಧವಾಗಿದೆ. ಕರ್ನಾಟಕದಲ್ಲಿ 9 ರಿಂದ 10 ತಂಡಗಳನ್ನು ವಿವಿಧೆಡೆ ನಿಯೋಜಿಸಲಾಗಿದೆ’ ಎಂದು ಎನ್‌ಡಿಆರ್‌ಎಫ್‌ನ ರಾಜೇಶ್ ಪ್ರಸಾದ್ ಚೌಧರಿ ತಿಳಿಸಿದ್ದಾರೆ.

‘ಉಡುಪಿ ಜಿಲ್ಲೆಯಲ್ಲಿ ಶನಿವಾರ ಸುರಿದ ಬಿರುಗಾಳಿ ಸಹಿತ ಮಳೆಗೆ 36 ಮನೆಗಳಿಗೆ ಹಾನಿಯಾಗಿದ್ದು, ₹ 11 ಲಕ್ಷ ನಷ್ಟ ಅಂದಾಜಿಸಲಾಗಿದೆ. 105 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 8 ವಿದ್ಯುತ್‌ ಪರಿವರ್ತಕ ಸುಟ್ಟಿವೆ. 60 ಮಂದಿಯನ್ನು ಸ್ಥಳಾಂತರಿಸಲಾಗಿದ್ದು, 16 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ, ಬಿಳ್ಳೂರು, ಕುಶಾಲನಗರ, ಚೌಳಿಕೆರೆ ಎಸ್ಟೇಟ್‌ ನಲ್ಲಿ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊಟ್ಟಿಗೆಹಾರ ಭಾಗದ ಜಾವಳಿ, ಮಲೆಮನೆ, ಕಲ್ಮನೆ ಹಾಗೂ ವಾಟೇಖಾನ್‌ನಲ್ಲಿ 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಬಿದ್ದಿವೆ. ಜಾವಳಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಚಾರ್ಮಾಡಿ ಘಾಟಿ ಭಾಗ ಕೆಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT